ಸೌಹಾರ್ದತೆಗೆ ಧಕ್ಕೆ ತರುವ ವಿಷಯಗಳ ಕುರಿತು ಫ್ಲೆಕ್ಸ್, ಬ್ಯಾನರ್ ಮತ್ತು ಮುದ್ರಣ ಅಂಗಡಿ ಮಾಲೀಕರು ತಿಳಿದುಕೊಂಡು ಎಚ್ಚರಿಕೆಯಿಂದ ತಮ್ಮ ವ್ಯವಹಾರ ನಿರ್ವಹಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಸಲಹೆ ನೀಡಿದ್ದಾರೆ.

ಭದ್ರಾವತಿ: ಸೌಹಾರ್ದತೆಗೆ ಧಕ್ಕೆ ತರುವ ವಿಷಯಗಳ ಕುರಿತು ಫ್ಲೆಕ್ಸ್, ಬ್ಯಾನರ್ ಮತ್ತು ಮುದ್ರಣ ಅಂಗಡಿ ಮಾಲೀಕರು ತಿಳಿದುಕೊಂಡು ಎಚ್ಚರಿಕೆಯಿಂದ ತಮ್ಮ ವ್ಯವಹಾರ ನಿರ್ವಹಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಸಲಹೆ ನೀಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲೆಕ್ಸ್, ಬ್ಯಾನರ್ ಮತ್ತು ಮುದ್ರಣ ಅಂಗಡಿ ಮಾಲೀಕರಿಗೆ ಈದ್ ಮಿಲಾದ್ ಹಾಗೂ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಹಬ್ಬಕ್ಕೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್, ಕರಪತ್ರ ಸೇರಿದಂತೆ ಇತರೆ ಮುದ್ರಿಸಿಕೊಡುವಾಗ ಎಚ್ಚರವಹಿಸಬೇಕು. ಸೌಹಾರ್ದತೆಗೆ ಧಕ್ಕೆ ತರುವ ವಿಷಯಗಳು ಕಂಡು ಬಂದಲ್ಲಿ ತಕ್ಷಣ ತಮಗೆ ಮಾಹಿತಿ ನೀಡಿ ಸಲಹೆ ಪಡೆದುಕೊಳ್ಳಬೇಕು. ಪ್ರತಿಯೊಂದು ವಿಷಯವನ್ನು ಪರಿಶೀಲಿಸಿ ಮುಂದುವರೆಯಬೇಕು. ಅಲ್ಲದೆ ತಪ್ಪುಗಳಿದ್ದಲ್ಲಿ ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸರಿಪಡಿಸಿಕೊಳ್ಳಲು ತಿಳಿಸಬೇಕೆಂದರು. ಗ್ರಾಮಾಂತರ ವೃತ್ತ ನಿರೀಕ್ಷಕ ಚಿದಾನಂದ, ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುನೀಲ್ ಬಿ. ತೇಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.