ಗದಗ: ಬಸವಾದಿ ಶರಣರ ವಚನ ಸಾಹಿತ್ಯದಿಂದ ಮನುಕುಲಕ್ಕೆಒಳಿತಾಗಿದೆ. ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗೆ ಮಾನವೀಯತೆ ಪ್ರತಿಪಾದಿಸುವ ಧರ್ಮ ಬಸವ ಧರ್ಮವಾಗಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ, ಶಿರೋಳದ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮಿಗಳು ಹೇಳಿದರು.
ಶರಣರ ವಚನಗಳು ಆದರ್ಶಮಯ ಬದುಕಿಗೆ ಬೆಳಕಾಗಿವೆ, ಎಲ್ಲರನ್ನೂ ಸನ್ಮಾರ್ಗದೆಡೆ ಮುನ್ನಡೆಸುವ ವಚನ ಸಾಹಿತ್ಯವನ್ನು ನಾವಿಂದು ಓದಬೇಕು, ಅರಿತುಕೊಳ್ಳಬೇಕು ಅದರಂತೆ ನಡೆದುಕೊಳ್ಳಬೇಕು ಅಂದಾಗ ಜೀವನ ಪಾವನಗೊಳ್ಳುವದು ಎಂದರು.
ಈ ವೇಳೆ ಶರಣ ಅಲ್ಲಮಪ್ರಭು ದೇವರ ವಚನ ಚಿಂತನೆ ಮಂಗಳಾ ಕಾಮಣ್ಣವರ ಮಾಡಿದರು. ಎಸ್.ಪಿ.ಹೊಂಬಳ ಸಂಗೀತ ನೀಡಿದರು. ಬಸವ ದಳದ ಅಧ್ಯಕ್ಷ ವಿ.ಕೆ. ಕರಿಗೌಡ್ರ ಮಾತನಾಡಿದರು. ಭಾರತಿ ಶಿವಕುಮಾರ ಪಾಟೀಲ ದಂಪತಿಗಳನ್ನು ಹಾಗೂ ವಚನ ಚಿಂತನೆಗೈದ ಮಂಗಳಾ ಕಾಮಣ್ಣವರ ಅವರನ್ನು ಪೂಜ್ಯರು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು, ಬಸವಾಭಿಮಾನಿಗಳು, ಒಕ್ಕಲಗೇರಿಯ ಗುರುಹಿರಿಯರು ಇದ್ದರು. ಶಿವಕುಮಾರ ಪಾಟೀಲ ಸ್ವಾಗತಿಸಿದರು, ಕಿರಣ ತಿಪ್ಪಣ್ಣವರ ನಿರೂಪಿಸಿದರು.