ಮುಂಡರಗಿ: ಬಸವಣ್ಣನವರು ಕಾಯಕ ಸಿದ್ಧಾಂತವನ್ನು ಹೇಳುವ ಮೂಲಕ ಮಹಾಮನೆಗೆ ಪ್ರವೇಶ ಮಾಡುವವರೆಲ್ಲರೂ ಲಿಂಗಧಾರಿಗಳಾಗಬೇಕು. ಯಾರು ಲಿಂಗಧಾರಿಗಳಾಗುತ್ತಾರೆಯೋ ಅವರೆಲ್ಲರೂ ಸತ್ಯಶುದ್ಧವಾದ ಕಾಯಕ ಮಾಡಬೇಕು. ಲಿಂಗವನ್ನು ಪೂಜಿಸುವ ಕೈ ಮತ್ತೊಬ್ಬರನ್ನು ಬೇಡಬಾರದು. ತನ್ನ ಉಪಜೀವನವನ್ನು ತಾನೇ ಮಾಡಿಕೊಳ್ಳಬೇಕು ಎನ್ನುವ ಸಿದ್ಧಾಂತವನ್ನು ಹೇಳಿಕೊಟ್ಟರು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಪ್ರತಿಯೊಬ್ಬ ಮನುಷ್ಯ ಯಾವುದಾದರೊಂದು ಕಾಯಕ ಮಾಡಬೇಕು. ಕಾಯಕ ಮಾಡಿ ಬಂದ ಹಣದಿಂದ ತನ್ನ ಉಪಜೀವನ ನಡೆಸಿಕೊಂಡು ಉಳಿದಿದ್ದರಲ್ಲಿ ದಾಸೋಹ ಮಾಡಬೇಕು. ಶರೀರ ಶ್ರಮದಿಂದ ಮಾಡುವ ಕಾಯಕಕ್ಕೆ ಶರಣರು ವಿಶೇಷ ಮಹತ್ವ ನೀಡಿದ್ದಾರೆ. ಬಸವಣ್ಣನವರು ಲಿಂಗಧಾರಣೆ ಮಾಡುವ ಮೂಲಕ ಸಮಾನತೆಯನ್ನು ತಂದು ಕೊಟ್ಟರು ಎಂದರು.
ನೇತೃತ್ವ ವಹಿಸಿದ್ದ ವಿರುಪಾಪುರ- ಕಲಕೇರಿಯ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಡವ ಶ್ರೀಮಂತರೆನ್ನುು ಭೇದಭಾವವನ್ನು ತೆಗೆದುಹಾಕಿ ಎಲ್ಲರೂ ಒಂದೇ ಎನ್ನುವ ಸಮಾನತೆಯನ್ನು ಸಾರಿದರು. ಕಾಯಕವೇ ಕೈಲಾಸ ಎಂದು ಹೇಳಿ ಕಾಯಕ ತತ್ವಕ್ಕೆ ನಿಜವಾದ ಅರ್ಥವನ್ನು ತಂದುಕೊಟ್ಟರು ಎಂದರು.ಪುರಸಭಾ ಮಾಜಿ ಸದಸ್ಯ ನಾಗೇಶ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವ ಜಯಂತಿ ಸಮಾಜದಲ್ಲಿ ಸಮಾನತೆ, ಭ್ರಾತೃತ್ವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯವ ಪ್ರಮುಖ ಹಬ್ಬವಾಗಿದೆ. ಇದು ಬಸವಣ್ಣನವರ ತತ್ವಾದರ್ಶಗಳನ್ನು ಎಲ್ಲೆಡೆ ಬಿತ್ತರಿಸುವ ಮಹತ್ತರವಾದ ದಿನವೂ ಆಗಿದೆ ಎಂದರು.
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಮಾನ್ವಿ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ- ಲಿಂಗಾಯತ ಮಹಾಸಭಾ ಸದಸ್ಯತ್ವ ಸ್ವೀಕರಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು.