ಯಲಬುರ್ಗಾ: ತಾಲೂಕಿನ ಬಂಡಿಹಾಳ ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಖ್ಯಾತ ಪುರಾಣ ಪ್ರವಚನಕಾರ ತಾಳಿಕೋಟಿಯ ಶ್ರೀ ಮಹಾಂತ ದೇವರು ಪುರಾಣ ಪ್ರವಚನ ನಡೆಸಿಕೊಡಲಿದ್ದು, ಶರಣಬಸವೇಶ್ವರರ ಜೀವನ, ಆದರ್ಶ, ತತ್ವ-ಸಿದ್ಧಾಂತಗಳು ಹಾಗೂ ಭಕ್ತಿಮಾರ್ಗದ ಕುರಿತು ಪ್ರವಚನದ ಮೂಲಕ ಭಕ್ತರಿಗೆ ಸಂದೇಶ ನೀಡಲಿದ್ದಾರೆ. ಅವರ ಪ್ರವಚನ ಆಲಿಸಲು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿದೆ. ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧೆಯಿಂದ ಭಾಗವಹಿಸಿದರು. ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಿಂದಾಗಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಂಗೀತಗಾರ ಅನಿಲಕುಮಾರ ಮಠಪತಿ, ಬಾಲಾಜಿ ಕಟ್ಟಿಸಂಗಾವಿ ಸಂಗೀತ ಸೇವೆ ಸಲ್ಲಿಸಿದರು. ಭಕ್ತಿಗೀತೆಗಳು ಹಾಗೂ ಸಂಗೀತದ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.ಪುರಾಣ ಪ್ರವಚನದ ಮೂಲಕ ಯುವಜನರು ಹಾಗೂ ಮಕ್ಕಳಿಗೆ ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶವೂ ಕಾರ್ಯಕ್ರಮದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪರಂಪರೆ, ಭಕ್ತಿ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.