ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ವತಿಯಿಂದ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ 2025 ಪುಸ್ತಕ ಬಿಡುಗಡೆ ಮತ್ತು ಸಾಕ್ಷ ಚಿತ್ರ ಬಿಡುಗಡೆ ಕಾರ್ಯಕ್ರಮ ಅಂಬಲಪಾಡಿ ಭವಾನಿ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ ವಿಜಯ ಬಲ್ಲಾಳ್, ಉಡುಪಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ, ಇಲ್ಲಿ ಪ್ರತಿನಿತ್ಯ ವಿವಿಧ ರೀತಿಯ ವೈಶಿಷ್ಟಪೂರ್ಣವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ನಮ್ಮ ಆಚಾರ ವಿಚಾರ, ಸಂಸ್ಕೃತಿಗಳ ಪರಿಚಯ ಇತರರಿಗೂ ಪ್ರಸಾರವಾಗುತ್ತಿದೆ. ಕವಿ ಕುರಾಡಿ ಸೀತಾರಾಮ ಅಡಿಗರು ಒಬ್ಬ ಶಿಕ್ಷಕ ಅಲ್ಲದೆ ಆದರ್ಶವಾದ ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ಅವರ ಹೆಸರಿನಲ್ಲಿ ನೀಡುತ್ತಿರುವ ಈ ಗೌರವ ನಿಜಕ್ಕೂ ಶ್ರೇಷ್ಠ ಎಂದರು.ಯುವ ಉದಯೋನ್ಮುಖ ಕವಿ ಶಶಿ ತರಿಕೆರೆ ಅನುಪಸ್ಥಿತಿಯಲ್ಲಿ ಪತ್ನಿ ರಶ್ಮಿ ತರಿಕೆರೆ ಅವರು ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಸ್ವೀಕರಿಸಿದರು. ಮಂಜುಶ್ರೀ ಕೃಷ್ಣ ಭಟ್ ಅವರ ಜೀವನ ಧರ್ಮ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ತನ್ನ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ಮನೆ ಮಾತಾಗಿದೆ. ಇದೊಂದು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.ಹಿರಿಯ ಪತ್ರಕರ್ತ ಎಸ್ ನಿತ್ಯಾನಂದ ಪಡ್ರೆ ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಪುಸ್ತಕಗಳ ಪ್ರಕಟಣೆ ಕಾರ್ಯ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದರು.ಹಿರಿಯ ಶಿಕ್ಷಣ ತಜ್ಞ ರಂಗಪ್ಪಯ್ಯ ಹೊಳ್ಳ ಪುಸ್ತಕ ಪರಿಚಯ ಮಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಸ್ಥಾಪಕ ಅಧ್ಯಕ್ಷ ನಾರಾಯಣ ಮಡಿ ವಂದಿಸಿದರು. ರಂಜನಿ ವಸಂತ್ ಪ್ರಾರ್ಥಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.ನಂತರ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಅವರ ಸಾಕ್ಷ್ಯಚಿತ್ರವನ್ನು ಕಾರ್ಯಕ್ರಮದ ಸಂಯೋಜಕ ಅವಿನಾಶ್ ಕಾಮತ್ ಉಪಸ್ಥಿತಿಯಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಬಿಡುಗಡೆಗೊಳಿಸಿದರು.