ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರಿಗೆ ಕಾಂಗ್ರೆಸ್ ಅಪಾರ ಗೌರವ ನೀಡಿತ್ತು. ಮುಂದೆಯೂ ಅವರನ್ನು ಗೌರವದಿಂದಲೇ ನೋಡಿಕೊಳ್ಳುತ್ತಿತ್ತು. ಹೀಗಾಗಿ ಅವರು ವಾಪಸ್ ಬಿಜೆಪಿಗೆ ಹೋಗಬಾರದಿತ್ತು ಎಂಬುದಷ್ಟೇ ನಮ್ಮ ನೋವು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ಸಿನಲ್ಲೇ ಇದ್ದಾರೆ, ಮುಂದೆಯೂ ಕಾಂಗ್ರೆಸ್ಸಿನಲ್ಲಿ ಇರುತ್ತಾರೆ ಎನ್ನುವ ಸಂಪೂರ್ಣ ನಂಬಿಕೆಯಿದೆ. ಏಕೆಂದರೆ, ಸವದಿಯವರೇ ನಾನು ಯಾವುದೇ ಕಾರಣಕ್ಕೂ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಏನು ಹೇಳುತ್ತಾರೆ, ಹಾಗೆಯೇ ನಡೆದುಕೊಳ್ಳುತ್ತಾರೆ. ಅವರ ಬಗ್ಗೆ ಸಂಶಯವಾಗಲಿ, ಅಪನಂಬಿಕೆಯಾಗಲಿ ಇಲ್ಲ ಎಂದು ಎಚ್ಕೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಜನರ ಗಮನ ಬೇರೆ ಸೆಳೆಯಲು ಧ್ವಜದಂತಹ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹತಾಶಗೊಂಡಿರುವ ಬಿಜೆಪಿಯವರು ಭಾವನಾತ್ಮಕ ವಿಷಯಗಳ ಮೇಲೆ ಏನಾದರೂ ಮಾಡಬೇಕೆಂದು ಹೊಸ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ. ಬಿಜೆಪಿಯವರ ಉದ್ದೇಶ ಏನೆಂಬುದು ಜನರಿಗೆ ಅರ್ಥವಾಗುತ್ತದೆ. ಹೀಗಾಗಿ ಏನೇ ಗೊಂದಲ ಸೃಷ್ಟಿಸಿದರೂ ಬಿಜೆಪಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.ಮಂಡ್ಯ ಧ್ವಜ ವಿಚಾರ ಇಟ್ಟುಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಭಟನೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ಇಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದ ಅವರು, ಮಂಡ್ಯ ಧ್ವಜ ವಿಚಾರದಲ್ಲಿ ಸರಕಾರಕ್ಕೆ ಏನು ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದರು.