ಕನ್ನಡಪ್ರಭ ವಾರ್ತೆ ರಾಮದುರ್ಗಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು, ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಕೇಂದ್ರ ಸಚಿವರಾಗಿಸಲು ಕ್ಷೇತ್ರದ ಜನರ ಇಚ್ಛೆಯಂತೆ ಬಿಜೆಪಿಪರ ಕೆಲಸ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಮಹಾದವಪ್ಪ ಯಾದವಾಡ ಹೇಳಿದರು.
ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರು ಇಬ್ಬರು ಬೆಂಗಳೂರು ಸೇರಿದ್ದು, ಇದರಿಂದ ತಾಲೂಕಿನ ಜನರ ಸಮಸ್ಯೆಗೆ ಸ್ಪಂದಿಸಲು ಯಾರೂ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರ ಬಂದು 11 ತಿಂಗಳಾದರೂ ತಾಲೂಕಿನ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಆರಂಭಿಸುವ ಧೈರ್ಯ ತೋರುತ್ತಿಲ್ಲ. ಇದು ಈ ಶಾಸಕರ ಕಾರ್ಯ ವೈಖರಿ ತೋರಿಸುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನೇಕ ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿವೆ. ಇದನ್ನು ನೋಡಿ ಇದು ನಮ್ಮ ಕೆಲಸ ಎಂದು ಸಂತಸ ಪಡಬೇಕಾಗಿದೆ ಎಂದರು.ಮಹಾದೇವಪ್ಪ ಯಾದವಾಡರು ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದಕ್ಕೆ ಕಾರ್ಯಕರ್ತರಿಗೆ ಬಹಳ ತೊಂದರೆಯಾಗಿದ್ದು, ಯಾವುದೇ ಕಾರಣಕ್ಕೂ ರಾಜಕಾರಣದಿಂದ ದೂರ ಇರಬೇಡಿ. ನಿಮ್ಮ ಮಾರ್ಗದರ್ಶನದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ನಡೆಯುತ್ತಾರೆ. ಮತ್ತೆ ಎಂದಿನಂತೆ ರಾಜಕಾರಣದಲ್ಲಿ ಮುಂದುವರೆಯಬೇಕು ಎಂದು ಪ್ರಸಾದ ಕುಲಕರ್ಣಿ, ಎಫ್.ಆರ್. ನಾಡಗೌಡ್ರ, ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಜಗದೀಶ ಲಾಹೋಟಿ ಇತರರು ಒತ್ತಾಯಿಸಿದರು.