ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬಿಜೆಪಿ ರಿಪೇರಿ ಮಾಡಲು ಸಾಧ್ಯವಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ ಅವರು, ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್ ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ ಇನ್ನು ಕೆಲವೊಮ್ಮೆ ಸೆಕೆಂಡ್ ಕ್ವಾಲಿಟಿ ಬರುತ್ತವೆ. ಪ್ರೊಡಕ್ಷನ್ ಯೂನಿಟ್ ಎಲ್ಲಿವರೆಗೂ ಚೆನ್ನಾಗಿರುತ್ತದೆಯೋ ಅಲ್ಲಿಯವರೆಗೂ ಬಿಜೆಪಿಯನ್ನು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಹೊಸದಾಗಿ ಮತಾಂತರಗೊಂಡವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಏನೇನೋ ಮಾಡುತ್ತಾರೆ, ಅದೇ ರೀತಿ ಶೆಟ್ಟರ್ ಸಹ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿ ಸೈದ್ಧಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಹೀಗಿರುವಾಗ ಬಿಜೆಪಿಗೆ ಬೈದರೆ ಕಾಂಗ್ರೆಸ್ ನವರು ನನ್ನನ್ನು ನಂಬುತ್ತಾರೆ ಎಂದು ಭಾವಿಸಿದ್ದಾರೆ. ಒಟ್ಟಾರೆಯಾಗಿ ಜಗದೀಶ್ ಶೆಟ್ಟರ್ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು. ಜಗದೀಶ್ ಶೆಟ್ಟರ್ ಪಕ್ಷ ಬದಲು ಮಾಡಿರಬಹುದು ಆದರೆ ಅವರ ರಕ್ತವನ್ನು ಬದಲು ಮಾಡಲು ಸಾಧ್ಯ ವಾಗುತ್ತದೆಯೇ ? ಜಗದೀಶ್ ಶೆಟ್ಟರ್ ಅವರ ರಕ್ತ ಜನಸಂಘದಿಂದ ಬಂದಂತಹ ಬಿಜೆಪಿ ರಕ್ತ ಎಂದು ತಿವಿದರು.