ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಶೈನಿ ಅಸ್ಮಾ

KannadaprabhaNewsNetwork |  
Published : Aug 14, 2026, 02:15 AM IST
ಮಹಿಳಾ ಪೈಲಟ್ | Kannada Prabha

ಸಾರಾಂಶ

ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ ಪೈಲೆಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್‌ (ಸಿಪಿಎಲ್‌) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಂ ಅಜೆಕಾರು ಕಾರ್ಕಳ: ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ ಪೈಲೆಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್‌ (ಸಿಪಿಎಲ್‌) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿ ಪುತ್ರಿ ಶೈನಿ ಅಸ್ಮಾ ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೇ ವಿಭಿನ್ನವಾದ ಕನಸನ್ನು ಹೊಂದಿದ್ದ ಅವರು, ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೈಲಟ್ ತರಬೇತಿಗೆ ಅಗತ್ಯವಾದ ಪರೀಕ್ಷೆಗಳನ್ನು ಎದುರಿಸಿದರು.

ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯ ಪ್ರವೇಶ ಪರೀಕ್ಷೆಯಲ್ಲಿ ದೇಶಾದ್ಯಂತ ಐದು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಸುಮಾರು 125 ಮಂದಿ ಆಯ್ಕೆಯಾಗಿದ್ದು, ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶೈನಿ, 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದರು.

ಬಾಲ್ಯದ ಕನಸು: ಪೈಲಟ್ ಆಗಬೇಕೆಂಬ ಕನಸು ಶೈನಿ ಅವರಲ್ಲಿ ಐದು ವರ್ಷದ ಬಾಲ್ಯದಲ್ಲೇ ಮೂಡಿತ್ತು. ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೂರಾರು ಮಂದಿ ಮೃತಪಟ್ಟ ಘಟನೆ ಬಾಲ್ಯದಲ್ಲಿ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಮೂಡಿದ ಕುತೂಹಲವೇ ಮುಂದೆ ಜೀವನದ ಗುರಿಯಾಗಿ ಪರಿವರ್ತನೆಯಾಯಿತು.

“ನಾನು ಐದು ವರ್ಷದವಳಿದ್ದಾಗ ಮಂಗಳೂರಿನಲ್ಲಿ ವಿಮಾನ ಅಪಘಾತ ಸಂಭವಿಸಿ ನೂರಾರು ಮಂದಿ ಮೃತಪಟ್ಟಿದ್ದರು. ಆ ಘಟನೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಗಲೇ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದೆ. ಹಲವು ವರ್ಷಗಳ ಬಳಿಕ ಇಂದು ಆ ಕನಸು ನನಸಾಗಿದೆ” ಎಂದು ಶೈನಿ ಅಸ್ಮಾ ಸಾಧನೆಯ ಪ್ರೇರಣೆ ಹಂಚಿಕೊಂಡಿದ್ದಾರೆ.

ಪೈಲಟ್ ತರಬೇತಿ ಸುಲಭದ ಹಾದಿಯಾಗಿರಲಿಲ್ಲ. ಸತತ ಪರಿಶ್ರಮ, ಶಿಸ್ತು, ತಾಂತ್ರಿಕ ಜ್ಞಾನ ಮತ್ತು ಮಾನಸಿಕ ಸಿದ್ಧತೆಯೊಂದಿಗೆ ತರಬೇತಿ ಪೂರ್ಣಗೊಳಿಸಿದ ಅವರು ವಿಮಾನ ಹಾರಾಟದ ಕೌಶಲ್ಯ, ಸುರಕ್ಷತಾ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಹಾರಾಟದ ಅಭ್ಯಾಸವನ್ನು ಪೂರ್ಣಗೊಳಿಸಿರುವ ಅವರು, ಡಿಜಿಸಿಎಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ.

“ನನ್ನ ತಂದೆ ಅಶೋಕ್ ಸಲ್ಡಾನ ಮತ್ತು ತಾಯಿ ಮರಿಯಾ ಗ್ರೆಟ್ಟಾ ಸಲ್ಡಾನ ಅವರೇ ನನ್ನ ಸ್ಫೂರ್ತಿ. ನಾನು ಬಾಲ್ಯದಲ್ಲಿ ಕಂಡ ಕನಸನ್ನು ಗುರಿಯಾಗಿಸಿಕೊಂಡು ಮುನ್ನಡೆಯಲು ತಂದೆಯ ಪ್ರೇರಣೆ ಪ್ರಮುಖ ಕಾರಣ” ಎಂದು ಅವರು ತಿಳಿಸಿದ್ದಾರೆ.ಶಿಕ್ಷಣದ ಬಳಿಕ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಪರಿಶ್ರಮಪಟ್ಟರೆ ಯಶಸ್ಸು ಖಚಿತ ಎಂಬ ವಿಶ್ವಾಸವನ್ನು ಶೈನಿ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿ.ನಾಗೇಂದ್ರ ರಾಜೀನಾಮೆಗೆ ನೀಡಲಿ
ನಡುಗಡ್ಡೆ ಪ್ರದೇಶದ ಸಂತ್ರಸ್ತರಿಗೆ ತಕ್ಷಣವೇ ನಿವೇಶನ ಕೊಡಿ