ಕನ್ನಡಪ್ರಭ ವಾರ್ತೆ ಕುಷ್ಟಗಿ
ಸಾಣೇಹಳ್ಳಿಯ ಶಿವಸಂಚಾರ ತಂಡದ ನಾಟಕಗಳು ಸಮಾಜದಲ್ಲಿನ ಮೌಢ್ಯ ತೊಡೆದು ಹಾಕಿ ನಮ್ಮ ಮನ ಪರಿವರ್ತನೆ ಮಾಡುವ ನೈಜ ನಾಟಕಗಳು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಮಾಜಿ ಶಾಸಕ ಹಸನಸಾಬ ದೋಟಿಹಾಳ ಖಾಲಿ ಜಾಗದಲ್ಲಿ ಉನ್ನತಿ ಸಾಂಸ್ಕೃತಿಕ ಮತ್ತು ರಿಕ್ರಿಯೇಷನ್ ಅಸೋಸಿಯೇಶನ್ ಸಹಕಾರದೊಂದಿಗೆ ಜರುಗಿದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸುವ ಉತ್ತಮ ನಾಟಕಗಳು ಈ ತಂಡದಿಂದ ಮೂಡಿಬಂದಿವೆ. ಡ್ಯಾನ್ಸ್ ಮಾಡುವುದು, ಕೇಕೆ ಹಾಕುವುದು ನಾಟಕವಲ್ಲ. ಸಮಾಜದಲ್ಲಿ ಮೌಢ್ಯವನ್ನು ತೊಡೆದು ಹಾಕುವ ಬದುಕಿನ ಅರಿವು ಮೂಡಿಸುವ ನಾಟಕಗಳು ನಿಜವಾದ ನಾಟಕ ಎಂದರು.ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಕೆಲವೇ ನಾಟಕ ಕಂಪನಿಗಳಲ್ಲಿ ಸಾಣೇಹಳ್ಳಿಯ ಶಿವಸಂಚಾರ ನಾಟಕ ಕಂಪನಿ ಉತ್ತಮ ಕಾರ್ಯ ಮಾಡುತ್ತಾ ಜನಮನದಲ್ಲಿ ಉಳಿದಿದೆ. ಸಾಮಾಜಿಕ ಕಳಕಳಿಯ ಕಾರ್ಯ ನಾಟಕ ಮುಖಾಂತರ ತೋರ್ಪಡಿಸುತ್ತಾರೆ ಇವರ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಾಡ್ಲೆಮಷಾಕ್ ದೋಟಿಹಾಳ ಮಾತನಾಡಿ, ಜನರ ಜೀವನಕ್ಕೆ ಉನ್ನತವಾದ ಸಂದೇಶ ನೀಡುವ ನಿಟ್ಟಿನಲ್ಲಿ ಶಿವಸಂಚಾರ ತಂಡ ಉತ್ತಮ ಕಾರ್ಯ ಮಾಡುತ್ತದೆ ಎಂದರು. ಈ ಸಂದರ್ಭ ಶಾಸಕ ದೊಡ್ಡನಗೌಡ ಪಾಟೀಲ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಉಮಾಪತಿ ಅಕ್ಕಿ, ನಾಟಕೋತ್ಸವ ಸಮಿತಿ ಮುಖ್ಯಸ್ಥ ಜೀವನಗೌಡ, ಅಡವಿರಾವ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.ನಾಟಕದ ತಾತ್ಪರ್ಯ:
ಶಿವ ಸಂಚಾರ ತಂಡದಿಂದ ನಡೆದ ತುಲಾಭಾರ ನಾಟಕ ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಧ್ಯಾನಸ್ಥರಾಗಿರುವಂತೆ ಮಾಡಿತು. ನಾಟಕವೂ ಕತ್ತಲು ಕವಿದಿರುವ ಸಮಾಜದಲ್ಲಿ ಜ್ಞಾನದ ದೀವಿಗೆ ಹಚ್ಚುವ ಶಿಕ್ಷಕನೊಬ್ಬನ ಸೇವೆಯ ಸಂಗತಿ ಸಾರಿತು. ಶಿಕ್ಷಣ ಕೊಡುವ ಮೂಲಕ ಬಡವರ ಬದುಕು ಬದಲಿಸಿದ ಶಿಕ್ಷಕ ಮೈನುದ್ದೀನ್ ಖಾಜಿಗೆ ತುಲಾಭಾರ ಸೇವೆ ಎಂಬ ಪರಿಕಲ್ಪನೆ ಸಾಮರಸ್ಯದ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು. ದೇವದಾಸಿಯರಿಗೆ ರಾತ್ರಿ ಪಾಠ, ವಯಸ್ಕರ ಶಿಕ್ಷಣ ಮುಂತಾದ ಚಿತ್ರಣಗಳು ಬದಲಾವಣೆಯ ಹಾದಿ ತೋರಿತು. ಅಂಥಹ ಶಿಕ್ಷಕನ ನಿವೃತ್ತಿಯ ನಂತರದ ಇಳಿ ವಯಸ್ಸಿನಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಾಡುವ ತುಲಾಭಾರ ಕಾರ್ಯಕ್ರಮ ಎಲ್ಲರ ಎದೆಯಲ್ಲಿ ಕೃತಜ್ಞತೆಯ ಧನ್ಯತೆ ಮೂಡಿಸಿತು. ಚೆಂದುರು ಗ್ರಾಮದಲ್ಲಿ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಲು ಇಳಿ ವಯಸ್ಸಿನಲ್ಲಿ ತುಲಾಭಾರದ ಮೊತ್ತದೊಂದಿಗೆ ತಮ್ಮ ಹಣ ಸೇರಿಸಿ ನೀಡಿದ ದೃಶ್ಯ ಗಮನ ಸೆಳೆಯಿತು. ಚಳಿಯನ್ನು ಲೆಕ್ಕಿಸದೆ ನೂರಾರು ಜನರು ನಾಟಕವನ್ನು ವೀಕ್ಷಿಸಿದರು.