- ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ವಾರ್ಷಿಕ ಸಭೆ
ಹೊನ್ನಾಳಿ: ತರಳಬಾಳು ಶ್ರೀಗಳ ಆರ್ಶೀವಾದದಿಂದ ಸ್ಥಾಪಿತವಾದ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಂದು ಹೆಮ್ಮರವಾಗಿ ಬೆಳೆದಿದೆ. ತಾಲೂಕಿನಲ್ಲಿ ಒಟ್ಟು 5 ಶಾಖೆಗಳನ್ನು ತೆರೆದು, ಸಂಘದ ಷೇರುದಾರರಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಬಿದರಹಳ್ಳಿಯ ಟಿ.ಚಂದ್ರಪ್ಪ ಹೇಳಿದರು.
ಸೋಮವಾರ ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ 25ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ವಾರ್ಷಿಕ ವರದಿ ಮಂಡಿಸಿ ಅವರು ಮಾತನಾಡಿದರು. ನಮ್ಮ ಸೊಸೈಟಿಯು 6655 ಸದಸ್ಯರನ್ನು ಹೊಂದಿದೆ. ವಾರ್ಷಿಕ ₹237 ಕೋಟಿ ವಹಿವಾಟನ್ನು ನಡೆಸುತ್ತಿದೆ. ಇದರಲ್ಲಿ ಸಂಘವು ಪ್ರಸಕ್ತ ಸಾಲಿನಲ್ಲಿ ₹40,78,453.00 ಲಾಭ ಗಳಿಸಿದೆ. ₹7.5 ಲಕ್ಷ ಆದಾಯ ತೆರಿಗೆ ಕಾಯ್ದಿರಿಸಿ, ₹33,28,453.00 ನಿವ್ವಳ ಲಾಭ ಗಳಿಸಿದೆ ಎಂದರು.ಸಂಘದಲ್ಲಿ ಸಾಲ ಪಡೆದ ಎಲ್ಲ ಷೇರುದಾರರು ಕಾಲಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು. ಹೀಗಾದಲ್ಲಿ ಮಾತ್ರ ನಮ್ಮ ಸೊಸೈಟಿ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಕಳೆದ ಸಾಲಿನ ವಾರ್ಷಿಕ ಮಹಾಸಭೆ ತೀರ್ಮಾನದಂತೆ ಮರಣ ಹೊಂದಿದ 66 ಸದಸ್ಯರ ಕುಟುಂಬಗಳಿಗೆ ಸಾಲಗಾರರ ಕ್ಷೇಮ ನಿಧಿಯಿಂದ ತಲಾ ₹5 ಸಾವಿರದಂತೆ ನೀಡಲಾಗಿದೆ. ಸಂಘದ ಎಲ್ಲ ಶಾಖೆಗಳಲ್ಲೂ ಲಾಕರ್ ಸೌಲಭ್ಯದ ಜೊತೆಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯದರ್ಶಿ ಎಚ್.ಎನ್. ರುದ್ರೇಶ್ ಮಾತನಾಡಿ, 2024-25ನೇ ಸಾಲಿನ ಆಡಿಟ್ಟಾದ ಜಮಾ ಖರ್ಚು, ಲಾಭ ನಷ್ಟ, ಆಸ್ತಿ ಜವಾಬ್ದಾರಿ ತಃಖ್ತೆಯನ್ನು ಓದಿ ಮಂಡಿಸಿದರು. 2024-25ನೇ ಸಾಲಿನ ಲಾಭ ವಿಂಗಡಣೆಯ ಮಾಹಿತಿಯನ್ನು ಷೇರುದಾರರಿಗೆ ತಿಳಿಸಿದರು.
- - -
ಶಿವ ಸೊಸೈಟಿ 25ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಟಿ. ಚಂದ್ರಪ್ಪ ಉದ್ಘಾಟಿಸಿದರು.