ಕುಕನೂರು:
ಬುಧವಾರ ಮಧ್ಯಾಹ್ನ ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನಕ್ಕೆ ಗ್ರಾಮದ ಹಿರೇಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು, ಸ್ವಾಮೀಜಿಗಳು ಶ್ರೀಗಳ ಅಂತಿಮ ದರ್ಶನ ಪಡೆದಿದ್ದರು. ಬುಧವಾರ ರಾತ್ರಿ ವಿವಿಧ ಗ್ರಾಮದಿಂದ ಆಗಮಿಸಿದ ಭಕ್ತರು ರಾತ್ರಿಯಿಡಿ ಭಜನೆ ಮಾಡಿದರು. ಗುರುವಾರ ಬೆಳಗ್ಗೆ ಸಹ ಭಕ್ತರು ತಂಡೋಪತಂಡವಾಗಿ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ಕಷ್ಟ ಎಂದು ಬಂದಾಗ ಶ್ರೀಗಳು ಸನ್ಮಾರ್ಗ ತೋರಿ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಕಂಬನಿ ಮಿಡಿದರು.
ಶ್ರೀಗಳ ಪಾರ್ಥೀವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಾವೇ ಮೊದಲೇ ನಿರ್ಮಿಸಿಕೊಂಡಿದ್ದ ಕ್ರಿಯಾ ಸಮಾಧಿಯಲ್ಲಿ ಶ್ರೀಗಳ ಪಾರ್ಥಿವ ಶರೀರ ಕೂಡ್ರಿಸಿ ಸಮಾಧಿ ಕೆಳಭಾಗದಲ್ಲಿ ವಿಭೂತಿ ಗಟ್ಟಿ ಹಾಗೂ ಮರಳು ಉಪ್ಪು ಹಾಕಲಾಯಿತು. ಶ್ರೀಗಳ ಶಿರ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಿ, ಮೃತ್ತಿಕೆ ಹಾಕಿ ಕಲ್ಲು ಹಾಸು ಹೊದಿಸಲಾಯಿತು.ಶ್ರೀಗಳ ಕ್ರಿಯಾ ಸಮಾಧಿ ನಂತರ ಭಕ್ತರು ಸಮಾಧಿ ಸ್ಥಳಕ್ಕೆ ಹೋಗಿ ನಮಸ್ಕರಿಸಿ ತೆರಳಿದರು. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು. ಹೀಗಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ರಂಭಾಪುರಿ ಶ್ರೀಗಳ ಸಂತಾಪ:
ಶಿವಸಂಗಮೇಶ್ವರ ಶಿವಾಚಾರ್ಯರ ಅಗಲಿಕೆಗೆ ರಂಭಾಪುರಿ ಪಂಚಪೀಠದ ಜಗದ್ಗುರುಗಳು ಸಂತಾಪ ನುಡಿ ಸಲ್ಲಿಸಿದ್ದಾರೆ. ಧರ್ಮ, ಸಂಸ್ಕೃತಿ, ಆದರ್ಶ ಪರಂಪರೆ ಆರಾಧಕರು ಶಿವಸಂಗಮೇಶ್ವರ ಶಿವಾಚಾರ್ಯರು ಆಗಿದ್ದರು. ಬದುಕಿನೂದ್ದಕ್ಕೂ ಆಚಾರ, ವಿಚಾರ ಕಾಪಾಡಿಕೊಂಡು ಬಂದಿದ್ದರು ಎಂದು ಪತ್ರ ಮೂಲಕ ಸಂತಾಪ ನುಡಿ ಕಳುಹಿಸಿದ್ದಾರೆ.