ಪ್ರೌಢಶಾಲೆಯ ಕಾರ್ಯಕ್ರಮ ಜ. 16 ರಂದು । ಜ. 17, 18, 19ರಂದು ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವ
ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದು, ತನ್ನ ಅಮೃತ ಮಹೋತ್ಸವ ಹಾಗೂ ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವಗಳನ್ನು 2026ರ ಜನವರಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅಶೋಕ ರಾಣೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1944ರಲ್ಲಿ ದಿವಂಗತ ಶಂಕರ ಬಾಬಿ ಸಾವಂತ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಈ ಸಂಸ್ಥೆ, ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದು, ಇದೀಗ ಸಂಭ್ರಮಾಚರಣೆಗೆ ಅಣಿಯಾಗುತ್ತಿದೆ ಎಂದರು.ಶಿವಾಜಿ ಶಿಕ್ಷಣ ಸಂಸ್ಥೆ ಹಾಗೂ ಶಿವಾಜಿ ಬಾಲಕರ ಪ್ರೌಢಶಾಲೆಯ ಅಮೃತ ಮಹೋತ್ಸವವು ಜ. 16 ರಂದು ಜರುಗಲಿದೆ. ಸಂಸ್ಥೆಯ ಇತರೆ ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವಗಳನ್ನು ಜ. 17, 18 ಮತ್ತು 19ರಂದು ಸತತ ನಾಲ್ಕು ದಿನಗಳ ಕಾಲ ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಶಾಸಕ ಸತೀಶ್ ಕೆ.ಸೈಲ್ ಅವರನ್ನು ಗೌರವಾಧ್ಯಕ್ಷರನ್ನಾಗಿ ಹಾಗೂ ಹಳೆ ವಿದ್ಯಾರ್ಥಿ ವಿನಾಯಕ ಸೈಲ್ ಅವರನ್ನು ಅಧ್ಯಕ್ಷರನ್ನಾಗಿ ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಹಿನ್ನಲೆ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಕೆ.ಪಿ ನಾಯ್ಕ, 1945ರಲ್ಲಿ ಬಾಲಕರ ಪ್ರೌಢಶಾಲೆಯೊಂದಿಗೆ ಆರಂಭವಾದ ಸಂಸ್ಥೆಯು, ನಂತರ 1966ರಲ್ಲಿ ಬಾಲಕಿಯರ ಶಾಲೆ, 1970ರಲ್ಲಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ 1972ರಲ್ಲಿ ಶಿಕ್ಷಣ ಮಹಾವಿದ್ಯಾಲಯಗಳನ್ನು ಸ್ಥಾಪಿಸಿತು. ಅಂದಿನ ಕಾಲದಲ್ಲಿ ಜಿಲ್ಲೆಯಲ್ಲೇ ಏಕೈಕ ಬಿಇಡಿ ಕಾಲೇಜು ಇದಾಗಿದ್ದರಿಂದ ಗೋವಾ ಮತ್ತು ಕೇರಳದ ವಿದ್ಯಾರ್ಥಿಗಳು ಕೂಡ ಇಲ್ಲಿ ವ್ಯಾಸಂಗ ಮಾಡಲು ಬರುತ್ತಿದ್ದರು. ಪ್ರಸ್ತುತ ಬಾಲಮಂದಿರದಿಂದ ಹಿಡಿದು ಪದವಿ ಪೂರ್ವ ಹಾಗೂ ಬಿಸಿಎ ಕಾಲೇಜುಗಳವರೆಗೆ ಹಲವು ವಿಭಾಗಗಳಲ್ಲಿ ವಾರ್ಷಿಕ ಸರಾಸರಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಮಹೋತ್ಸವದ ಅಂಗವಾಗಿ, ₹4 ಕೋಟಿ ವೆಚ್ಚದಲ್ಲಿ ಪಿಯು ಕಾಲೇಜಿಗೆ ನೂತನ ಕಟ್ಟಡ, ₹1.20 ಕೋಟಿ ವೆಚ್ಚದಲ್ಲಿ ಮಹಿಳಾ ವಸತಿ ನಿಲಯದ ವಿಸ್ತರಣೆ, ₹45 ಲಕ್ಷ ವೆಚ್ಚದಲ್ಲಿ ನಾಲ್ಕು ಶಾಲಾ ಬಸ್ಗಳ ಖರೀದಿ, ಆಟದ ಮೈದಾನದ ಅಭಿವೃದ್ಧಿಗೆ ₹25 ಲಕ್ಷ ಮೀಸಲು ಇರಿಸಿದ್ದು, ಮುಂಬೈ ಉದ್ಯಮಿ ಶಿವಾನಂದ ದತ್ತಾತ್ರಯ ಸಾವಂತ ಸಿಎಸ್ಆರ್ ಅಡಿಯಲ್ಲಿ ₹3.60 ಕೋಟಿ ಮೌಲ್ಯದ ಸುಸಜ್ಜಿತ ಕಟ್ಟಡವನ್ನು ಈಗಾಗಲೇ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ನಾಲ್ಕು ದಿನಗಳ ಈ ಉತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನ ಕಲಾವಿದರಿಂದ ನಾಟಕ, ವಿದ್ಯಾರ್ಥಿಗಳಿಂದ ಯಕ್ಷಗಾನ ಹಾಗೂ ಅಂತಿಮ ದಿನವಾದ ಜ. 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ಮರಾಠಿ ನಾಟಕ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಮಾಜಿ ಮತ್ತು ಹಾಲಿ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಾಧಕ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸಂಸ್ಥೆಯ ಪ್ರಮುಖರಾದ ಪ್ರಕಾಶ್ ರಾಣೆ, ಕಿಶೋರ್ ರಾಣೆ, ಶಿವಾನಂದ ಕದಮ್ ಇದ್ದರು.