ಶಿವಾಜಿ ಮಹಾರಾಜ ಅಪ್ರತಿಮ ದೇಶಭಕ್ತ: ಪ್ರೊ. ಸುಧಾ ಹುಚ್ಚಣ್ಣವರ

KannadaprabhaNewsNetwork |  
Published : Apr 28, 2026, 02:15 AM IST
ಶಿರಹಟ್ಟಿಯ ಶ್ರೀ ಬಸವೇಶ್ವರ ವೃತ್ತದಲ್ಲಿ ಸೋಮವಾರ ವಿಶ್ವಗುರು ಬಸವಣ್ಣನವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

೧೬ ವರ್ಷದಲ್ಲಿರುವಾಗಲೇ ಸಕಲ ಯುದ್ಧ ಕಲೆಗಳನ್ನು ಮೈಗೂಡಿಸಿಕೊಂಡಿದ್ದರು. ಶಿವಾಜಿ ದಿಟ್ಟ ಯೋಧ ಹಾಗೂ ಚತುರ ಆಡಳಿತರಾರರಾಗಿದ್ದರು.

ಶಿರಹಟ್ಟಿ: ಛತ್ರಪತಿ ಶಿವಾಜಿ ಮಹಾರಾಜರು ಒಬ್ಬ ದೇಶಭಕ್ತ. ಅವರಲ್ಲಿದ್ದ ಶೌರ್ಯ, ಧೈರ್ಯ, ಸ್ಥೈರ್ಯ ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ಮೂಡಿಸಬೇಕು. ಶಿವಾಜಿ ಮಹಾರಾಜರು ಸರ್ವ ಧರ್ಮೀಯರಲ್ಲಿ ಒಳಿತು ಬಯಸಿದ ಮಹಾನ್ ಪುರುಷ ಎಂದು ಎಫ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ತಿಳಿಸಿದರು.

ಸೋಮವಾರ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ೧೬ ವರ್ಷದಲ್ಲಿರುವಾಗಲೇ ಸಕಲ ಯುದ್ಧ ಕಲೆಗಳನ್ನು ಮೈಗೂಡಿಸಿಕೊಂಡಿದ್ದರು. ಶಿವಾಜಿ ದಿಟ್ಟ ಯೋಧ ಹಾಗೂ ಚತುರ ಆಡಳಿತರಾರರಾಗಿದ್ದರು. ಸ್ಥಳೀಯ ಆಡಳಿತಕ್ಕೆ ಹೆಚ್ಚು ಒತ್ತು ನೀಡಿದ ಶಿವಾಜಿ ಧಾರ್ಮಿಕ ಸಹಿಷ್ಣುತೆಯನ್ನು ತನ್ನ ಆಡಳಿತದಲ್ಲಿ ಜಾರಿ ಮಾಡಿದ್ದರು. ಹೊಸ ಯುದ್ಧ ನೀತಿಯನ್ನು ಜಾರಿ ಮಾಡಿದ ಶಿವಾಜಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೆಸರುವಾಸಿಯಾಗಿದ್ದರು. ಸಹ್ಯಾದ್ರಿ ಪರ್ವತಗಳ ಕಾರ್ಯತಂತ್ರಗಳನ್ನು ಬಳಕೆ ಮಾಡಿಕೊಂಡು, ಭೌಗೋಳಿಕತೆಗೆ ಅನುಗುಣವಾಗಿ ಯುದ್ಧ ನೀತಿಯನ್ನು ಅನುಸರಿಸಿ ಅದರಲ್ಲಿ ಯಶಸ್ಸನ್ನೂ ಕಂಡರು ಎಂದರು.

ಶಿಕ್ಷಕಿ ರೇಣುಕಾ ನಾಗರಾಜ ಲಕ್ಕುಂಡಿ ಬಸವಣ್ಣವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಬಸವ ಜಯಂತಿ ದಿನದಂದು ವಿಶ್ವಗುರು ಬಸವಣ್ಣನವರನ್ನು ಕೇವಲ ಪೂಜಿಸಿ, ಅದ್ಧೂರಿ ಮೆರವಣಿಗೆ ನಡೆಸಿ ಹಾಡಿ ಹೊಗಳಿದರೆ ಸಾಲದು. ಅವರ ಬದುಕಿನ ಆದರ್ಶಗಳು ನಮ್ಮ ಜೀವನದ ಭಾಗವಾಗಬೇಕು. ಆಗ ಜಯಂತಿ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.

೧೨ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವದ ಮಹಾನ್ ಚೇತನ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ. ಎಲ್ಲರೂ ನನ್ನವರೆನ್ನುವ ವಿಶ್ವಭಾತೃತ್ವ ಹಾಗೂ ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಪ್ರಭಾವದಿಂದ ಜಗತ್ತನ್ನೇ ಬೆಳಗಿದ ಜಗಜ್ಯೋತಿ. ಇಡೀ ವಿಶ್ವಕ್ಕೆ ಕಾಯಕ ತತ್ವವನ್ನು ಸಾರಿದ ಶ್ರೇಷ್ಠ ಮಾನವತಾವಾದಿ ಬಸವಣ್ಣನವರ ಬದುಕಿನ ಅಧ್ಯಯನ ಇಂದಿನ ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಸಮಿತಿಯ ಬಸವರಾಜ ತುಳಿ ವಹಿಸಿದ್ದರು. ಗೂಳಪ್ಪ ಕರಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಎಚ್.ಎಂ. ದೇವಗಿರಿ, ಎನ್.ಆರ್. ಕುಲಕರ್ಣಿ, ನಾಗರಾಜ ಲಕ್ಕುಂಡಿ, ಕೆ.ಎ. ಬಳಿಗೇರ, ಪರಮೇಶ ಪರಬ, ಅಜ್ಜುಗೌಡ್ರ ಪಾಟೀಲ, ಹೊನ್ನಪ್ಪ ಶಿರಹಟ್ಟಿ, ನಂದಕ್ಕ ಕಪ್ಪತ್ತನವರ, ಎಂ.ಕೆ. ಲಮಾಣಿ, ಎಸ್.ಬಿ. ಹೊಸೂರ, ಬಸವರಾಜ ಹಲಸೂರ, ಸಂದೀಪ ಕಪ್ಪತ್ತನವರ, ರವಿ ಗುಡಿಮನಿ, ಬಸವರಾಜ ಭೋರಶೆಟ್ಟರ, ಸುರೇಶ ಹವಳದ, ವಿಠ್ಠಲ ಬಿಢವೆ ಅಕ್ಬರಸಾಬ ಯಾದಗಿರಿ, ಸಂತೋಷ ತೋಡೆಕಾರ, ರಾಮಣ್ಣ ಕಂಬಳಿ, ಶಿವಯೋಗಿ ಪಟ್ಟಣಶೆಟ್ಟಿ, ಅಲ್ಲಾಭಕ್ಷಿ ನಗಾರಿ, ಮಲ್ಲು ಕಬಾಡಿ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬೆಳಗ್ಗೆ ೯ಕ್ಕೆ ಮರಾಠಾಗಲ್ಲಿಯ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಮೆರವಣಿಗೆಯು ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ವಚನ ಸಾಹಿತ್ಯ ಪ್ರೇರಣಾದಾಯಕ
ಬಸವಣ್ಣ ನಾನು ಲಿಂಗಾಯತ ಧರ್ಮದವನು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ