- ಸ್ಟ್ರಾಂಗ್ ರೂಂ ಬೀಗ ತೆಗೆಯದೇ, ಚಿಲಕ ಒಡೆದ ಗಂಭೀರ ಪ್ರಮಾದಕ್ಕೆ ಆಮ್ ಆದ್ಮಿ ಆಕ್ರೋಶ - - -
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಮುನ್ನ ಸ್ಟ್ರಾಂಗ್ ರೂಂ ಬಾಗಿಲು ತೆರೆಯುವಲ್ಲಿ ಆಗಿರುವ ಲೋಪದೋಷದ ಬಗ್ಗೆ ಕೇಂದ್ರ, ರಾಜ್ಯ ಚುನಾವಣಾ ಆಯೋಗಗಳು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ, ಪರಾಜಿತ ಅಭ್ಯರ್ಥಿ ಕೆ.ಎಸ್. ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರದಲ್ಲಿ ಸಕಾಲಕ್ಕೆ ವಿದ್ಯುನ್ಮಾನ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಂಗಳ ಬಾಗಿಲುಗಳಿಗೆ ಹಾಕಿದ್ದ ಬೀಗಗಳನ್ನು ಕೀಗಳಿಂದ ತೆಗೆದಿಲ್ಲ. ಬದಲಿಗೆ ಸುತ್ತಿಗೆಯಿಂದ ಚಿಲಕಗಳನ್ನು ಒಡೆದು, ರೂಂಗಳ ಬಾಗಿಲುಗಳನ್ನು ತೆರೆದಿರುವುದು ಮಹಾಲೋಪವಾಗಿದೆ. ಈ ವಿಚಾರವನ್ನು ಆಯೋಗಗಳು ಗಂಭೀರವಾಗಿ ಪರಿಗಣಿಸಲಿ ಎಂದರು.ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಗದ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಸೋಮವಾರ ಸಂಜೆಯೇ ಇ-ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸೋಮವಾರ ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ನಾವು ಹೋಗಿದ್ದೆವು. 8 ಗಂಟೆಯಾದರೂ ಸ್ಟ್ರಾಂಗ್ ರೂಂ ಬಾಗಿಲು ತೆರೆದಿರಲಿಲ್ಲ. ಯಾವ ಕಾರಣಕ್ಕೆ ಸ್ಟ್ರಾಂಗ್ ರೂಂ ಬಾಗಿಲು ತೆರೆಯುತ್ತಿಲ್ಲವೆಂದು ಚುನಾವಣಾಧಿಕಾರಿಗೆ ಕೇಳಿದರೆ ಬೀಗದ ಸಂಖ್ಯೆ ವ್ಯತ್ಯಾಸವಾಗಿದೆ. ಹಾಗಾಗಿ, ಸುತ್ತಿಗೆಯಿಂದ ಚಿಲಕ ಒಡೆದು, ಬಾಗಿಲು ತೆರೆಯುವುದಾಗಿ ಹೇಳಿದರು ಎಂದು ದೂರಿದರು.
ಅಲ್ಲದೇ, ಸ್ಟ್ರಾಂಗ್ ರೂಂ ತೆರೆಯಲು ವಿಳಂಬವಾದಾಗಲೇ ಫಲಿತಾಂಶವನ್ನು ಪ್ರಕಟಿಸದಂತೆ ತಡೆ ಕೋರಿ ಲಿಖಿತ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಹಾಗೆ ಮಾಡಲಿಲ್ಲ. ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ. ಸ್ಟ್ರಾಂಗ್ ರೂಂಗಳ ಚಿಲಕಗಳ ಸುತ್ತಿಗೆಯಿಂದ ಹೊಡೆದು ಬಾಗಿಲು ತೆಗೆದಿದ್ದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಚುನಾವಣಾಧಿಕಾರಿ ಸಂತೋಷಕುಮಾರ ಅವರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿದರು. ಸ್ಟ್ರಾಂಗ್ ರೂಂ ಬೀಗದ ಕೀಲಿ ಕೈಗಳು ನಾಪತ್ತೆಯಾದ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.
- - -
- ಕೆ.ಎಸ್.ಶಿವಕುಮಾರಪ್ಪ, ಜಿಲ್ಲಾಧ್ಯಕ್ಷ, ಆಮ್ ಆದ್ಮಿ ಪಕ್ಷ, ದಕ್ಷಿಣ ಕ್ಷೇತ್ರ ಪರಾಜಿತ ಅಭ್ಯರ್ಥಿ.
-5ಕೆಡಿವಿಜಿ2: