ಕನ್ನಡಪ್ರಭ ವಾರ್ತೆ ಬೀದರ್
ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್ 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್ ಕೌರ್ ಸೌದಿ ಪ್ರಶಸ್ತಿ, ದಿ. ಪಂ. ದಿ.ವಿ.ಪಾಲುಸ್ಕರ್ ಪ್ರಶಸ್ತಿ, ಸೌ.ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ, ಹರಿಓಂ ಟ್ರಸ್ಟ್ (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್ ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿ.ಸೌ.ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್–ಡಿಸೆಂಬರ್ ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ್ಯಾಂಕ್ ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ ತಾಯಿ, ಕುಟುಂಬಸ್ಥರು ಹಾಗೂ ಬೀದರ್ ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಶಿವಾನಿ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸ್ಸು ಮಾಡಲಿ: ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ರಾಜೇಂದ್ರ ಸಿಂಗ್ ಪವಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ್, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.