ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಶಿವಾನುಭವ ಸಮಿತಿ, ಅಕ್ಕಮ ಬಳಗ, ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಮುಂಡರಗಿ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿಇವುಗಳ ಸಹಯೋಗದಲ್ಲಿ ಜೂ. 11ರಂದು ಬೆಳಗ್ಗೆ 11 ಗಂಟೆಗೆ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ 1831ನೇ ಮಾಸಿಕ ಶಿವಾನುಭವ ಜರುಗಲಿದೆ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು. ಅವರು ಶನಿವಾರ ಶ್ರೀಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಮ್ಮ ಮಠದಲ್ಲಿ ಜರುಗುತ್ತಿರುವ ಶಿವಾನುಭವಕ್ಕೆ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು 1.25 ಲಕ್ಷ ರು.ಗಳ ದತ್ತಿ ನಿಧಿ ಸ್ಥಾಪಿಸಿದ್ದು, ಅದರಲ್ಲಿ ಪ್ರತಿವರ್ಷ ಅದರಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗುತ್ತಿದೆ ಎಂದರು.
ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿ, ಕಾರ್ಯಕ್ರಮದಲ್ಲಿ ಡಿಜಿಪಿ ಪ್ರಶಂಸನ ಪದಕ ಪುರಸ್ಕೃತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗಣ್ಯರಾದ ಕಮಲಮ್ಮ ಹನಮಂತಗೌಡ ಪಾಟೀಲ, ನಿವೃತ್ತ ಪ್ರಾ.ಎಸ್.ಆರ್. ಚಿಗರಿ, ಡಾ.ಡಿ.ಸಿ. ಮಠ, ಡಿ.ಟಿ. ಪಾಟೀಲ, ಡಿಜಿಪಿ ಪದಕ ಪುರಸ್ಕೃತ ಪೊಲೀಸ್ ಪೇದ ಜಾಫರ್ ಬಚೇರಿ ಅವರಿಗೆ ಗೌರವ ಸಮರ್ಪಣೆ ಜರುಗಲಿದೆ. ಕಾರ್ಯಕ್ರಮದಲ್ಲಿ 2025ರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ಪುರಸ್ಕಾರ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಜಿ. ಕೋಲ್ಮಿ, ಎಂ.ಎಚ್. ಪೂಜಾರ, ಎಸ್.ಬಿ. ಗಿಂಡಿಮಠ, ಹಾಲಯ್ಯ ಹಿರೇಮಠ ಉಪಸ್ಥಿತರಿದ್ದರು.