ಕಾರಟಗಿ: ೧೨ನೇ ಶತಮಾನದಲ್ಲಿ ಎಲ್ಲ ಸಮಾಜಗಳನ್ನು ಸಮಾನವಾಗಿ ಕಾಣುವ ಮೂಲಕ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾಗಿದ್ದು, ಕೆರೆ ಕಟ್ಟೆ, ಕಲ್ಲು ಕುಟ್ಟುವ ಕೆಲಸ ಮಾಡಿಕೊಂಡಿದ್ದ ಒಂದು ಸಮುದಾಯಕ್ಕೆ ಜೀವನದ ಭದ್ರ ಬುನಾದಿ ಒದಗಿಸಿಕೊಟ್ಟ ಆದಿಪುರುಷ ಶಿವಯೋಗಿ ಸಿದ್ದರಾಮೇಶ್ವರರು ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್ ಹೇಳಿದರು.
ಸಿದ್ದರಾಮೇಶ್ವರರಿಗೆ ೮೦೦ವರ್ಷಗಳ ಇತಿಹಾಸವಿದೆ. ೧೨ನೇ ಶತಮಾನಕ್ಕೆ ಸೇರಿದ ಸಿದ್ದರಾಮೇಶ್ವರ ಸ್ವಾಮಿಗಳು ಎಲ್ಲ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿದ್ದರು. ಬಸವಣ್ಣನವರ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಅಸಮಾನತೆ, ವರ್ಣ, ಜಾತಿ ಲಿಂಗಬೇಧ ತೊಡೆದು ಹಾಕುವ ಕೆಲಸ ವಚನಗಳ ಮೂಲಕ ಮಾಡಿದವರು. ಮೂಲತಃ ಮಹಾರಾಷ್ಟ್ರದವರಾದ ಇವರು ಕರ್ನಾಟದಲ್ಲಿ ತಮ್ಮ ಜನಾಂಗದ ಏಳ್ಗೆಗಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಠಮಾನ್ಯ ಸ್ಥಾಪಿಸಿ ಜನಸೇವೆ ಮಾಡಿದ ಮಹಾನ್ ಪುರುಷ. ಆದರ್ಶ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ. ಶಿವಯೋಗಿಗಳ ವಿಚಾರಧಾರೆ ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.
ಸಿಬ್ಬಂದಿ ಚನ್ನಬಸವಸ್ವಾಮಿ ಹಿರೇಮಠ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಕಚೇರಿಯ ಅಧಿಕಾರಿಗಳು, ಭೊವಿ ಸಮಾಜದ ಗಣ್ಯರು, ಸಿಬ್ಬಂದಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಪುರಸಭೆ ಕಚೇರಿ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಇತರರು ಇದ್ದರು.
ನಂತರ ತಹಸೀಲ್ದಾರ ಸೇರಿದಂತೆ ಕಚೇರಿಯ ಸಿಬ್ಬಂದಿ, ಭೋವಿ ಸಮಾಜದ ಗಣ್ಯರು ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಭಕ್ತಿಯಿಂದ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಭೋವಿ ಸಮಾಜದ ಮುಖಂಡರು ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಣ್ಣ ಹಳ್ಳಿಕೇರಿ, ಪ್ರಮೀಳಾದೇವಿ, ಯಶೋಧ ಇದ್ದರು.