ಕನ್ನಡದ ಬೆಳವಣಿಗೆಗೆ ಶಿವಶರಣರ ಕೊಡುಗೆ ಅಪಾರ

KannadaprabhaNewsNetwork | Published : Nov 9, 2024 1:14 AM

ಸಾರಾಂಶ

ಮರಾಠಿಮಯವಾಗಿದ್ದ ಕನ್ನಡ ಪ್ರದೇಶದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಕನ್ನಡ ಶಾಲೆ ತೆರೆದು ಕನ್ನಡ ಭಾಷೆ ಉಳಿಸಿದ್ದಾರೆ

ಗದಗ: ಕನ್ನಡ ನಾಡು ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ. ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನ ರಚಿಸಿದ್ದಾರೆ. ಲಿಂಗಾಯತ ಧರ್ಮ ಮತ್ತು ಕನ್ನಡದ ಬೆಳವಣಿಗೆಗೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾದುದು ಎಂದು ಜ.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ 2718ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಹೊಂದಿದೆ. ಪಂಪ ಕನ್ನಡದ ಆದಿಕವಿಯಾದರೆ, ಅಕ್ಕಮಹಾದೇವಿ ಆದಿಕವಿಯಿತ್ರಿ ಎಂದರು.

ಮೊದಲಿದ್ದ ಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿದೆ. ಏಕೀಕರಣದ ಹೊರಾಟದಿಂದ ಕನ್ನಡ ಭಾಷೆ ಆಡುವ ಪ್ರದೇಶವನ್ನು ಕರ್ನಾಟಕವೆಂದು ನಾಮಕರಣ ಮಾಡಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದರು. ಮರಾಠಿಮಯವಾಗಿದ್ದ ಕನ್ನಡ ಪ್ರದೇಶದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಕನ್ನಡ ಶಾಲೆ ತೆರೆದು ಕನ್ನಡ ಭಾಷೆ ಉಳಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು, ಗಡಿನಾಡು ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಟ್ಟುವ ಕೆಲಸವಾಗಬೇಕು. ಕನ್ನಡಕ್ಕಾಗಿ ಹೋರಾಡಿದ ದಿಗ್ಗಜರನ್ನು ಸ್ಮರಿಸಿಕೊಳ್ಳಬೇಕು ಎಂದರು.

ಈ ವೇಳೆ ಅಂತೂರು-ಬೆಂತೂರಿನ ಶ್ರೀರಾಚೋಟೇಶ್ವರ ಸ್ವಾಮಿಗಳು ಅಂತೂರ ಬೆಂತೂರ ವಿಶೇಷ ಕನ್ನಡ ತಿಂಗಳಿನ ಕಾರ್ಯಕ್ರಮವನ್ನು ವಿನೂತನವಾಗಿ ತಂತ್ರಾಂಶ ಬಳಸಿಕೊಂಡು ರಿಮೋಟ್ ಡಿವೈಸ್ ಉಪಯೋಗಿಸಿ ಉದ್ಘಾಟಿಸಿದರು.

ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿದ್ಧಲಿಂಗೇಶ್ವರ ಹಲಸೂರು ಅವರು, ತೋಂಟದಾರ್ಯ ಮಠದಲ್ಲಿ ನಡೆದ ನವೆಂಬರ್ ತಿಂಗಳ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಕನ್ನಡದ ದಿಗ್ಗಜರು ವಿಷಯ ಕುರಿತು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತಿ, ಕವಿ, ಸಾಹಿತ್ಯ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಜಿ.ಬಿ.ಬೀಡನಾಳ ಹಾಗೂ ಸುವರ್ಣ ಸಂಭ್ರಮ ವಿಶೇಷ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದ ಸುರೇಶ ಠಾಕರಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣವನ್ನು ಸೌಜನ್ಯ ಎಸ್. ಹಳ್ಳಿಕೇರಿ, ವಚನ ಚಿಂತನವನ್ನು ಛಾಯಾ ಜಿ.ಜಂಗಮನಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶರಣ ಕರಿಯಪ್ಪ ಸಿದ್ದಲಿಂಗಪ್ಪ ಜಂಗಳಿ ಕನಕಶ್ರೀ ಮೆಡಿಕಲ್ ಸ್ಟೋರ್ ಗದಗ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸದಸ್ಯರಾದ ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ್ ಗಾಣಿಗೇರ, ನಾಗರಾಜ ಹಿರೇಮಠ, ಬಸವರಾಜ ಕಾಡಪ್ಪನವರು, ಶಿವಾನಂದ ಹೊಂಬಳವ, ಜಿಲ್ಲಾ ಶರಣ ಸಾಹಿತ್ಯ ಪರಿಷಿತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಇದ್ದರು.

ಶಿವಾನುಭವ ಸಮಿತಿಯ ಚೆರಮನ್‌ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ಉಪಾಧ್ಯಕ್ಷ ಡಾ. ಉಮೇಶ ಪುರದ ನಿರೂಪಿಸಿದರು.

Share this article