ಶಿವಶರಣ ಸಮಗಾರ ಹರಳಯ್ಯ ಐತಿಹಾಸಿಕ ನಾಟಕ ಪ್ರದರ್ಶನ

KannadaprabhaNewsNetwork |  
Published : Dec 02, 2025, 02:30 AM IST
ಕಂಪ್ಲಿಯಲ್ಲಿ ಶ್ರೀ ಪೇಟೆ ಬಸವೇಶ್ವರ ರಥೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಸಮಗಾರ ಹರಳಯ್ಯ ಐತಿಹಾಸಿಕ ನಾಟಕ ಪ್ರದರ್ಶನ ಜರುಗಿತು.  | Kannada Prabha

ಸಾರಾಂಶ

ಪೇಟೆ ಬಸವೇಶ್ವರ ನೀಲಮ್ಮ ರಥೋತ್ಸವದ ಅಂಗವಾಗಿ ಕಂಪ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಯ ಸಂಭ್ರಮ ನೆರೆದಿದೆ.

ಕಂಪ್ಲಿ: ಪೇಟೆ ಬಸವೇಶ್ವರ ನೀಲಮ್ಮ ರಥೋತ್ಸವದ ಅಂಗವಾಗಿ ಕಂಪ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಯ ಸಂಭ್ರಮ ನೆರೆದಿದ್ದು, ಅದರ ಭಾಗವಾಗಿ ದಿನವಹಿ ಮಾರುಕಟ್ಟೆ ಮುಂಭಾಗದಲ್ಲಿ ಭಾನುವಾರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು.

ರಾಮಸಾಗರ ಗ್ರಾಮದ ಶ್ರೀ ಬಸವೇಶ್ವರ ನಾಟ್ಯಕಲಾ ಸಂಘದ ಕಲಾವಿದರಿಂದ “ಶಿವಶರಣ ಸಮಗಾರ ಹರಳಯ್ಯ” ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಶರಣರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸಮಗಾರ ಹರಳಯ್ಯರು ಬದುಕಿನಲ್ಲಿ ಅನುಸರಿಸಿದ ಸಮಾನತೆ, ಮಾನವತೆ ಹಾಗೂ ಶ್ರಮದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ನಾಟಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶ್ಲಾಘಿಸಿದರು.

ನಾಟ್ಯಕಲಾ ಸಂಘದ ಕಲಾವಿದರು ವಿಭಿನ್ನ ಪಾತ್ರಧಾರಿಗಳ ಮೂಲಕ ಹರಳಯ್ಯರ ಜೀವನ, ಸಮಾಜ ಸುಧಾರಣೆಗೆ ನೀಡಿದ ಕೊಡುಗೆ, ಹಾಗೂ ಶರಣ ಸಂಪ್ರದಾಯದ ಆದರ್ಶಗಳನ್ನು ಪರಿಣಾಮಕಾರಿಯಾಗಿ ವೇದಿಕೆಯ ಮೇಲೆ ಮೂಡಿಸಿದರು.

ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ, ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಎ. ಚನ್ನಪ್ಪ, ಮುಖಂಡರಾದ ಸಿದ್ದಿ ಅಂಜಿನಪ್ಪ, ಅಶೋಕ್ ಕುಕನೂರು, ಡಿ.ರಂಗಯ್ಯ ಇದ್ದರು.

ಗಂಗಾವತಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಕೆ.ಪಂಪಣ್ಣ ರಚಿಸಿದ ಶಿವಶರಣ ಸಮಗಾರ ಹರಳಯ್ಯ ಐತಿಹಾಸಿಕ ನಾಟಕದಲ್ಲಿ, ಬಸವಣ್ಣ ಪಾತ್ರಧಾರಿಗಾಗಿ ಸಿ.ಚನ್ನಬಸವ, ಮದುವರಸನಾಗಿ ವಸಂತರಾಜ ಕಹಳೆ, ಅಲ್ಲಮಪ್ರಭುವಾಗಿ ಕಹಳೆ ಹುಲುಗಪ್ಪ, ಬಿಜ್ಜಳನಾಗಿ ಸಿ.ಕೆ.ಚಿದಂಬರಯ್ಯ, ಹರಳಯ್ಯನಾಗಿ ಕಾಳಿ ಹನುಮಂತಪ್ಪ, ಮುಕ್ತಿನಾಥನಾಗಿ ಪ್ರಹ್ಲಾದ ಮಣ್ಣೂರು, ಕಲ್ಯಾಣಮ್ಮಳಾಗಿ ಪಿ.ಗಂಗಾಂಬಿಕೆ, ಲಾವಣ್ಯವತಿಯಾಗಿ ಪೂರ್ಣಿಮಾ ಕುಕುನೂರು, ಪೆದ್ದರಸನಾಗಿ ಡಿ.ವೆಂಕಟೇಶ್, ಶೀಲವಂತನಾಗಿ ವೀರೇಶ್, ಮಡಿವಾಳ ಮಾಚಿದೇವನಾಗಿ ಕೆ.ವಿರುಪಾಕ್ಷಿ, ಚನ್ನಬಸವಣ್ಣನಾಗಿ ರವಿಮಣ್ಣೂರು, ಬಹುರೂಪಿ ಚೌಡಯ್ಯನಾಗಿ ಕಾಳಿ ವಿರುಪಾಕ್ಷಿ, ಕೆಂಚಣ್ಣನಾಗಿ ಡಿ.ಎಂ.ಮೂರ್ತಿ, ದ್ಯಾಮಣ್ಣನಾಗಿ ಸಿ.ನಾಗರಾಜ, ನಾರಾಯಣ ಭಟ್ಟನಾಗಿ ಕಾಳಿ ಕೃಷ್ಣ, ಹಡಪದ ಅಪ್ಪಣ್ಣನಾಗಿ ಸಿ.ರೇಣುಕಪ್ಪ ಮನೋಜ್ಞವಾಗಿ ಅಭಿನಯಿಸಿದರು.

ಪಾಮಯ್ಯ ಶರಣರ ನಾಟಕ ನಿರ್ದೇಶನದಲ್ಲಿ, ಮೆಟ್ರಿ ಮೌನೇಶ್ ತಬಲವಾದಕರಾಗಿ, ರಾಮು ಕ್ಯಾಶಿಯೋ ವಾದಕರಾಗಿ, ರಾಮಸಾಗರದ ವಸಂತರಾಜ ಕಹಳೆ ಹಿನ್ನಲೆ ಗಾಯಕರಾಗಿ, ಕೆ.ಎಂ.ಬಸವ ರಕ್ಷಿತ ವಚನ ಗಾಯಕರಾಗಿ, ಪಿ.ಗಂಗಾಂಬಿಕೆ ನೃತ್ಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. ಶ್ರೀಗುರು ಬಸವ ಬಳಗ ವಚನ ನೃತ್ಯ ತಂಡದ ಕಲಾವಿದರು ವಚನಗಳಿಗೆ ನೃತ್ಯ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ