ಕಲ್ಲು ಕ್ವಾರಿ ಮಾಲೀಕನಿಂದ ಶೂಟೌಟ್: ವ್ಯಕ್ತಿಗೆ ಗಾಯ

KannadaprabhaNewsNetwork | Published : Apr 24, 2025 12:03 AM

ಸಾರಾಂಶ

ಕಲ್ಲು ಕ್ವಾರಿಗೆ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಬೇಡವೆಂದು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕಲ್ಲು ಕ್ವಾರಿ ಮಾಲೀಕ ಗುಂಡು ಹಾರಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಲ್ಲು ಕ್ವಾರಿಗೆ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಬೇಡವೆಂದು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕಲ್ಲು ಕ್ವಾರಿ ಮಾಲೀಕ ಗುಂಡು ಹಾರಿಸಿದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನ ಕೊಪ್ಪ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಕಲ್ಲು ಕ್ವಾರಿ ಮಾಲೀಕ ಸಕಲೇಶಕುಮಾರ್ ಎಂಬುವವ ರಿವಾಲ್ವರ್‌ನಿಂದ ಫೈರಿಂಗ್ ಮಾಡಿದ್ದು, ಗುಂಡು ತಗುಲಿ ಚಿಕನ್ ರವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನ ಕೊಪ್ಪ ಗ್ರಾಮದ ಹೊರವಲಯದಲ್ಲಿ ಮಾಜಿ ಎಂಎಲ್​ಸಿ ವೈ.ಎ. ನಾರಾಯಣಸ್ವಾಮಿ ಸಂಬಂಧಿ ಸಕಲೇಶಕುಮಾರ್ ಎಂಬುವವ ಸುಮಾರು 3 ವರ್ಷಗಳ ಹಿಂದೆ ಕಲ್ಲು ಕ್ವಾರಿ ತೆರೆದು ಕ್ರಷರ್ ನಿರ್ಮಾಣಕ್ಕೆ ನಾಲ್ಕು ಎಕರೆ ಜಮೀನು ಖರೀದಿಸಿ, ಗಣಿ ಭೂ ವಿಜ್ಞಾನ ಇಲಾಖೆಯಿಂದ ಅನುಮತಿಯನ್ನು ಸಹಾ ಪಡೆದಿದ್ದರು. ಈಗ ದಾರಿಗಾಗಿ ಸರ್ಕಾರಿ ಜಾಗದಲ್ಲಿ ಮಣ್ಣು ಹೊಡೆದು ಹಸನು ಮಾಡಲು ತೀರ್ಮಾನಿಸಿ ಬುಧವಾರ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಹೊಡೆಯುತ್ತಿದ್ದರು. ಆದರೆ ಕನಗಾನ ಕೊಪ್ಪ ಗ್ರಾಮ ಮತ್ತು ಸುತ್ತಮುತ್ತಲಿನ ಜನ ಕಲ್ಲು ಕ್ವಾರಿ ಮತ್ತು ಕ್ರಷರ್ ನಿರ್ಮಾಣಕ್ಕೆ ಹಾಗೂ ದಾರಿಗಾಗಿ ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಶಾಸಕ ಪ್ರದೀಪ್ ಈಶ್ವರ್‌ಗೆ ಮನವಿ ಸಹಾ ನೀಡಿದ್ದರು.ಇಂದು ಸಹಾ ದಾರಿಗಾಗಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಹೊಡೆಯುತ್ತಿದ್ದ ಸರ್ಕಾರಿ ಜಾಗದ ಬಳಿ ತೆರಳಿ ಪ್ರತಿರೋಧ ವ್ಯಕ್ತಪಡಿಸಿದಾಗ ಗ್ರಾಮಸ್ಥರು ತನಗೆ ಕಲ್ಲಿನಿಂದ ಹೊಡೆದರೆಂದು ಇದರಿಂದ ತನ್ನ ತಲೆಗೆ ಗಾಯವಾಯಿತು ಎಂದು ಕಲ್ಲು ಕ್ವಾರಿ ಮಾಲೀಕ ಸಕಲೇಶಕುಮಾರ್ ತಲೆಯ ಮೇಲೆ ಎಡಗೈ ಇಟ್ಟುಕೊಂಡು ತನ್ನ ರಿವಾಲ್ವಾರ್‌ನಿಂಡ ಗುಂಡು ಹಾರಿಸಿ ಚಿಕನ್ ರವಿ ಎಂಬುವವರ ತೊಡೆಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.ಈ ಕುರಿತು ಗುಂಡಿನ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಪಡೆಯುತ್ತಿರುವ ಚಿಕನ್ ರವಿ ಮಾತನಾಡಿ, ಕಲ್ಲು ಕ್ವಾರಿ ಮತ್ತು ಕ್ರಷರ್ ನಿರ್ಮಾಣಕ್ಕೆ ನಮ್ಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ವಿರೋಧ ವ್ಯಕ್ತಪಡಿಸಿ ಸಾಕಷ್ಟು ಪ್ರತಿಭಟನೆ ನಡೆಸಿ ಎಲ್ಲಾ ಅಧಿಕಾರಿಗಳಿಗೆ, ಪೊಲೀಸರಿಗೆ ಮತ್ತು ಶಾಸಕರಿಗೂ ದೂರು ನೀಡಿದ್ದೆವು.ಆದರೆ ಇಂದು ದಾರಿಗಾಗಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಹೊಡೆಯುತ್ತಿದ್ದ ಸರ್ಕಾರಿ ಜಾಗದ ಬಳಿ ಗ್ರಾಮಸ್ಥರೊಂದಿಗೆ ತೆರಳಿ ಪ್ರತಿರೋಧ ವ್ಯಕ್ತಪಡಿಸಿದಾಗ ಸಕಲೇಶ್ ಕುಮಾರ್ ಅವರು ಚಿಕ್ಕಬಳ್ಳಾಪುರದಿಂದ ಸಾಗರ್ ಎಂಬಾತನೊಂದಿಗೆ ನೂರಕ್ಕೂ ಹೆಚ್ಚು ಗೂಂಡಾಗಳೊಂದಿಗೆ ಆಗಮಿಸಿ ನಮ್ಮ ಮೇಲೆ ಹಲ್ಲೆ ನಡೆಸಿ, ಏಕಾಏಕಿ ನನ್ನ ಮೇಲೆ ಸಿನಿಮೀಯ ರೀತಿಯಲ್ಲಿ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಅವರು ಹಾರಿಸಿದ ಗುಂಡು ನನ್ನ ತೊಡೆ ಹೊಕ್ಕಿದೆ, ಇದಕ್ಕೆ ಸ್ಥಳೀಯ ಅಧಿಕಾರಿಗಳು ಮತ್ತು ಮಂಚೇನಹಳ್ಳಿ ಸಬ್ ಇನ್‌ಸ್ಪೆಕ್ಟರ್ ಮೂರ್ತಿ ಸಹ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿದರು.ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಲ್ ಹಾಗೂ ತಹಸೀಲ್ದಾರ್ ದೀಪ್ತಿ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸಕಲೇಶ ಕುಮಾರ್​ನನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಕಲೇಶ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ.ಕೋಟ್‌........

ಮಾಜಿ ಎಂಎಲ್​ಸಿ ವೈ.ಎ. ನಾರಾಯಣಸ್ವಾಮಿ ಮತ್ತು ಕ್ರಷರ್ ಮಾಲಿಕ ಸಕಲೇಶಕುಮಾರ್ ನಾವು ತುಂಭಾ ಪ್ರಭಾವಿಗಳಾಗಿದ್ದು, ಸಿ.ಎಂ.ಸಿದ್ದರಾಮಯ್ಯ, ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ. ನೀವು ಏನು ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು.

ಚಿಕನ್‌ ರವಿ, ಗಾಯಗೊಂಡ ವ್ಯಕ್ತಿಸಿಕೆಬಿ-1 ಗುಂಡೇಟಿನಿಂದ ಗಾಯಗೊಂದು ಆಸ್ಪತ್ರೆಯಲ್ಲಿ ಚಿಕ್ಇತ್ಸೆ ಪಡೆಯುತ್ತಿರುವ ಚಿಕನ್ ರವಿ

ಸಿಕೆಬಿ-2 ಸಕಲೇಶಕುಮಾರ್ ತಲೆಯ ಮೇಲೆ ಎಡಗೈ ಇಟ್ಟು ಕೊಂಡು ತನ್ನ ರಿವಾಲ್ವಾರ್ ನಿಂಡ ಗುಂಡು ಹಾರಿಸುತ್ತಿರುವುದು

Share this article