ಶಿರಸಿ: ಹೋರಾಟ, ಅಭಿವೃದ್ಧಿ ವಿಷಯದಲ್ಲಿ ಜಾತಿ ತರುವುದು ಅಕ್ಷಮ್ಯ ಅಪರಾಧವಾಗಿದ್ದು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಹೋರಾಟದಲ್ಲಿ ಶಾಸಕರನ್ನು ಟೀಕೆ ಮಾಡಿದ್ದಾರೆಯೇ ಹೊರತು ಜಾತಿ ಟೀಕಿಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಸ್ಪಷ್ಟಪಡಿಸಿದರು.
ಅನಂತಮೂರ್ತಿ ಹೆಗಡೆ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಅನುದಾನ ಕುರಿತಾಗಿ ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಟೀಕೆ ಮಾಡಿದ್ದಾರೆ. ಆಸ್ಪತ್ರೆ ಹೋರಾಟ ಸಾರ್ವಜನಿಕ ಸಮಸ್ಯೆ, ಇದು ಬ್ರಾಹ್ಮಣ, ನಾಮಧಾರಿ, ಈಡಿಗ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇನ್ಯಾವುದೋ ಒಂದು ಜಾತಿಗೆ, ಸಮುದಾಯಕ್ಕೆ ಸೀಮಿತವಾದ ಹೋರಾಟವಲ್ಲ. ಆಸ್ಪತ್ರೆ ಎಂದಾಕ್ಷಣ ಎಲ್ಲ ಜಾತಿ-ಧರ್ಮದವರೂ ಬಂದು ಚಿಕಿತ್ಸೆ ಪಡೆಯುತ್ತಾರೆ. ಎಲ್ಲರ ಪರವಾಗಿ ಅನಂತಮೂರ್ತಿ ಹೆಗಡೆ ಆಸ್ಪತ್ರೆಯ ಕುರಿತಾದ ಎಲ್ಲ ದಾಖಲೆಗಳನ್ನು ಆರ್ಟಿಐ ಮೂಲಕ ಸಂಗ್ರಹಿಸಿ ಅನುದಾನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಹೊರತು ಇನ್ಯಾವುದೋ ಜಾತಿ ಅಥವಾ ವೈಯಕ್ತಿಕ ದ್ವೇಷದಿಂದಲ್ಲ. ಜಾತಿ ನಿಂದನೆ ಎನ್ನುವ ಸ್ವರೂಪ ಪಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ ಭಂಡಾರಿ, ಶ್ರೀರಾಮ ನಾಯ್ಕ, ರಾಘವೇಂದ್ರ ನಾಯ್ಕ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.