ಕನ್ನಡಪ್ರಭ ವಾರ್ತೆ ಮಂಗಳೂರು
ಈ ಲೋಕಸಭಾ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರಗಳು, ಬೀಚ್, ಪಶ್ಚಿಮಘಟ್ಟ ಇತ್ಯಾದಿ ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಜನರು ಅಭಿವೃದ್ಧಿಗಾಗಿ ಬೆಂಬಲಿಸಬೇಕು ಎಂದು ಹೇಳಿದರು.
ತುಳುನಾಡು ದೈವ- ದೇವರ ನಾಡಾಗಿದ್ದು, ಸತ್ಯ, ಧರ್ಮ, ನಿಷ್ಠೆಯೇ ಈ ನೆಲದ ಅಸ್ಮಿತೆ. ದೇವರು- ದೇವಾಲಯಗಳನ್ನೊಂಡ ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮ ಸಲ್ಲದು. ಸತ್ಯ, ಧರ್ಮ, ಸೌಹಾರ್ದತೆಯ ಗೆಲುವಾಗಬೇಕು ಎಂದು ಹೇಳಿದ ಜನಾರ್ದನ ಪೂಜಾರಿ, ಹಿಂದು ಅಂದರೆ ಮಾನವೀಯತೆಯ ಧರ್ಮ. ಮಾನವೀಯತೆಗಿಂತಲೂ ಮಿಗಿಲಾದ ಧರ್ಮವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಇದನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ ಎಂದರು.ದ.ಕ. ಜಿಲ್ಲೆಗೆ ಬಂದರು, ವಿಮಾನಯಾನ, ರೈಲು, ರಸ್ತೆ ಸಾರಿಗೆ ನೀಡಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ. ಭೂಮಸೂದೆ ಜಾರಿ ಮೂಲಕ ನಾಡಿನ ಶೇ.80ರಷ್ಟು ಮಂದಿ ಭೂಮಿಯ ಒಡೆಯರಾದರು. 70 ವರ್ಷಗಳಲ್ಲಿ ಏನಾಗಿದೆ ಕೇಳುವವರು ಕಳೆದ 33 ವರ್ಷಗಳಲ್ಲಿ ಜನರಿಗೆ ಏನಾದರೂ ಕೊಡುಗೆ ಸಿಕ್ಕಿದ್ದರೆ ಹೇಳಲಿ ಎಂದರು.
ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಆಗಬೇಕಿದೆ. ಯುವ ಸಮುದಾಯಕ್ಕೆ ಕೆಲಸ ನೀಡಿ ಮುನ್ನಡೆಸುವ ಕೆಲಸ ಮಾಡಬೇಕು. ನಾರಾಯಣ ಗುರುಗಳು, ವಿವೇಕಾನಂದರ ತತ್ವ ಚಿಂತನೆಯನ್ನು ಇಂದಿನ ಯುವ ಸಮಾಜ ಅರ್ಥೈಸಿಕೊಳ್ಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.