-ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ 42ನೇ ಪುಣ್ಯತಿಥಿ । ಶ್ರಾವಣ ಮಾಸದ ಸ್ಮರಣಾರ್ಥ ಧಾರ್ಮಿಕ, ಸಾಮಾಜಿಕ ಪ್ರವಚನ
ಕನ್ನಡಪ್ರಭ ವಾರ್ತೆ ಕಲಬುರಗಿ
ಶ್ರಾವಣ ಮಾಸದ ಪ್ರಯುಕ್ತ ಕಲಬುರಗಿ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿಯವರ 42ನೇ ಪುಣ್ಯ ಸ್ಮರಣೋತ್ಸವದಂಗ ಹಾಗೂ ಡಾ. ಶರಣಬಸವಪ್ಪ ಅಪ್ಪಾಜಿಯವರು ಮಹಾದಾಸೋಹ ಪೀಠಾರೋಹಣಗೈದು 41 ವರ್ಷ ಸಂದಿರುವ ಸ್ಮರಣಾರ್ಥ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆ ಹಾಗೂ ವಿಶೇಷ ಕಾರ್ಯಕ್ರಮ ಜುಲೈ 24ರಂದು ಸಂಜೆ 7 ಗಂಟೆಗೆ ಚಾಲನೆ ದೊರೆಯಲಿದೆ.ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದ್ದಾರೆ.
ಬಸವೇಶ್ವರರ ಜೀವನ ಮತ್ತು ಅವರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ಜಾತಿರಹಿತ ಸಮಾಜ ನಿರ್ಮಿಸಲು ಅವರ ಜೀವಿತಾವಧಿಯ ಪ್ರಯತ್ನವನ್ನು ಒಳಗೊಂಡ ವಿವಿಧ ಅಂಶಗಳ ಕುರಿತು, ಧಾರ್ಮಿಕ ಪ್ರವಚನದ ನಂತರ ದೈನಂದಿನ ಪ್ರವಚನ ನಡೆಯಲಿವೆ. ಸಂಸ್ಥಾನವು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ವಿವಿಧ ಕೇಂದ್ರಗಳಿಂದ ವಿದ್ವಾಂಸರನ್ನು, ಬಸವೇಶ್ವರರ ಜೀವನ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ಮಾತನಾಡಲು ಆಯ್ಕೆ ಮಾಡಿದೆ.
ಶರಣಬಸವ ವಿವಿ ಉಪಕುಲಪತಿ ಅನಿಲಕುಮಾರ ಬಿಡವೆ ಅವರು “ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು” ಎಂಬ ವಿಷಯದ ಕುರಿತು ಮಾತನಾಡುವರು. ಮುದಗಲ್ ಕಲ್ಯಾಣ ಆಶ್ರಮದ ಮಹಾಂತ ಸ್ವಾಮಿ ಅವರ ಧಾರ್ಮಿಕ ಪ್ರವಚನದ ನಂತರ ಮಹಾತ್ಮ ಬಸವೇಶ್ವರರ ಜೀವನ ಮತ್ತು ಕೊಡುಗೆಯ ವಿವಿಧ ಅಂಶಗಳ ಕುರಿತು 40 ದಿನಗಳ ಪ್ರವಚನ ನಡೆಯಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಪ್ರವಚನಗಳಿಗೆ ಮುನ್ನ ವಿವಿಧ ತಂಡಗಳಿಂದ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಫೋಟೋ- ಮಾತೋಶ್ರೀ