ಸಾಯಿ ಸ್ಟೋನ್ ಕ್ರಷರ್ ಪರವಾನಗಿ ರದ್ದು ಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಪಟ್ಟಣದ ತಹಸ್ಹೀಲ್ ಕಚೇರಿ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಮದ ಶ್ರೇಯಾ ಸ್ಟೋನ್ ಕ್ರಷರ್ ಹಾಗೂ ಸಾಯಿ ಸ್ಟೋನ್ ಕ್ರಷರ್ ಪರವಾನಗಿ ರದ್ದು ಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಪಟ್ಟಣದ ತಹಸ್ಹೀಲ್ ಕಚೇರಿ ಮುಂದೆ ತಾಲೂಕು ಜೆಡಿಎಸ್ ಜಿಲ್ಲಾ ವಕ್ತಾರರ ನೇತೃತ್ವದಲ್ಲಿ ವಜ್ರಬಂಡಿ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ವೇಳೆ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ನೇತೃತ್ವ ವಹಿಸಿ ಮಾತನಾಡಿ ತಾಲೂಕಿನ ವಜ್ರಬಂಡಿ ಹಾಗೂ ಕೊನಸಾಗರ ಗ್ರಾಮದ ಮತ್ತು ಸುತ್ತಮತ್ತಲಿನ ಗ್ರಾಮದ ಜನರಿಗೆ ಶ್ರೇಯಾ ಸ್ಟೋನ್ ಕ್ರಷರ ಮತ್ತು ಸಾಯಿ ಸ್ಟೋನ್ ಕ್ರಷರ್ ಹಾಗೂ ಕಂಪನಿಗಳು ಕಲ್ಲು ಸ್ಫೋಟಿಸುತ್ತವೆ. ಇದರಿಂದ ಆಗುವ ತೊಂದರೆ ಕುರಿತು ಹೇಳಿಕೊಳ್ಳಲು ಹೋದರೆ ಜೀವ ಬೇದರಿಕೆ ಹಾಕುವುದು ಮತ್ತು ತಮ್ಮ ಕೈ ಕೆಳಗೆ ಕೆಲಸ ಮಾಡುವ ಜನರಿಂದ ಹಾನಿ ಮಾಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಸುತ್ತಿದ್ದಾರೆ. ಹೀಗಾಗಿ, ಕ್ರಷರ್ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಸ್ಥಳಿಯ ನಿವಾಸಿ, ವಕೀಲ ಪ್ರಕಾಶ ಮೇಲಸಕ್ರಿ ಮಾತನಾಡಿ, ಗಣಿಗಾರಿಕೆ ನಿಲ್ಲಿಸಲು ಅನೇಕ ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸ್ಫೋಟಿಸಿದ ಕಲ್ಲುಗಳು ಚದುರಿ ಬರುವುದರಿಂದ ಹಾಗೂ ಸ್ಫೋಟ ಶಬ್ದದಿಂದ ಶಾಲಾ ವಿಧ್ಯಾರ್ಥಿಗಳು, ಸುತ್ತಮುತ್ತಲಿನ ರೈತರು, ಕೃಷಿ ಕೆಲಸಕ್ಕೆ ತೆರಳುವವರು ಭಯಭೀತರಾಗಿದ್ದಾರೆ. ಆದ್ದರಿಂದ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಕ್ಕೆ ಬೆಂಬಲ
ಕರ್ನಾಟಕ ರಕ್ಷಣಾ ವೇದೀಕೆ ಪ್ರವೀಣ ಶೆಟ್ಟಿ ಬಣ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದ್ದು, ಯಾವ ಅಧಿಕಾರಿಗಳು ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಇದೇ ಧೋರಣೆ ಮುಂದುವರಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಮುತ್ತಪ್ಪ ವಡ್ಡರ ಮಾತನಾಡಿ, ಬುಧವಾರ ಸಂಜೆ ೫:೩೦ರ ಸುಮಾರಿಗೆ ಸ್ಫೋಟಿಸಿದ ವೇಳೆ ಕಲ್ಲುಗಳು ಕ್ಯಾರಿಯಿಂದ ಸುಮಾರು ೨.೫ ಕಿಮೀ ದೂರದವರೆಗೆ ಬಂದಿವೆ. ದೊಡ್ಡ ಗಾತ್ರದ ಕಲ್ಲು ಮನೆಯೊಳಗೆ ಬಂದು ಬಿದ್ದಿದೆ. ಈ ವೇಳೆ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆರೋಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.