ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಪ್ರಸಿದ್ದ ಶ್ರೀ ಹುಚ್ಚುರಾಯ ಸ್ವಾಮಿ ಕೆರೆ ದಡದಲ್ಲಿ ಶ್ರೀ ಕೇವಲಾನಂದ ಅವಧೂತರು ಸಂಸ್ಥಾಪಿಸಿದ ಶ್ರೀ ದತ್ತ ಕೇವಲಾನಂದಾಶ್ರಮದಲ್ಲಿ ಭಕ್ತ ಸಮೂಹಕ್ಕೆ ಉಪನಿಷತ್ತು, ಭಕ್ತಿ, ಜ್ಞಾನ, ವೈರಾಗ್ಯಗಳ ವೇದ ವೇದಾಂತವನ್ನು ನಿತ್ಯ ಬೋಧಿಸಿ ಶ್ರೀ ಕ್ಷೇತ್ರವನ್ನು ದತ್ತ ಉಪಾಸನಾ ಕ್ಷೇತ್ರವನ್ನಾಗಿಸಿದ್ದು ಶೃಂಗೇರಿಯ ಶ್ರೀ ಶಂಕರಾಚಾರ್ಯ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ತತ್ಕರ ಕಮಲ ಸಂಜಾತರಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ಶಂಕರಾಚಾರ್ಯ, ಶ್ರೀ ದತ್ತಾತ್ರೇಯ, ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ದಿವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕುಂಬಾಬಿಷೇಕ ನೆರವೇರಿಸಿ ಅನುಗ್ರಹ ಗೈದಿದ್ದು ಪರಮಪವಿತ್ರವಾದ ಕ್ಷೇತ್ರದಲ್ಲಿ ಪ್ರತಿವರ್ಷ ವಿಶೇಷವಾಗಿ ಶ್ರೀ ದತ್ತ ಜಯಂತಿ ಸತತ ವಾರದ ಕಾಲ ಸಂಪ್ರದಾಯಬದ್ದವಾಗಿ ನಡೆಯುತ್ತಿದೆ.
ಈ ಬಾರಿ ಕಳೆದ ನ.28ರ ಶುಕ್ರವಾರದಿಂದ ಆರಂಭವಾದ ಮಹೋತ್ಸವದಲ್ಲಿ ನಿತ್ಯ ಬೆಳಿಗ್ಗೆ ಸುಮಂಗಲಿಯರಿಂದ ಕಾಕಡಾರತಿ ನಂತರ ನವಗ್ರಹ ಪೂರ್ವಕ ಗಣಹೋಮ, ಶ್ರೀ ರಾಮತಾರಕ ಹೋಮ, ಶ್ರೀ ಸೂಕ್ತ ಹೋಮ ಹಸಿಬಿಕ್ಷಾ, ಶ್ರೀ ದುರ್ಗಾ ಹೋಮ ಲಲಿತ ಸಹಸ್ರನಾಮ ಕುಂಕುಮಾರ್ಚನೆ, ಶ್ರೀ ರುದ್ರಹೋಮ ಡೋಲೋತ್ಸವ, ಗುರುವಾರ ಶ್ರೀ ದತ್ತ ಹೋಮ ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಶ್ರೀ ದತ್ತಾತ್ರೇಯರ ಪಲ್ಲಕ್ಕಿ ಉತ್ಸವ ಶಾಸ್ತ್ರೋಕ್ತವಾಗಿ ನೆರವೇರಿತು. ಸುಮಂಗಲಿಯರ ಕೋಲಾಟದಿಂದ ಉತ್ಸವದ ಮೆರಗು ಇಮ್ಮಡಿಯಾಗಿತ್ತು. ಸಹಸ್ರಾರು ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.ವಿಪ್ರ ಸಮಾಜದ ಪ್ರಮುಖರಾದ ನ್ಯಾಯವಾದಿ ವಸಂತಮಾಧವ, ನರಸಿಂಹರಾವ್ ದೂಪದಹಳ್ಳಿ, ದಿವಾಕರ ದೀಕ್ಷಿತ್, ಶಾಲಾಸ್ತ್ರಿ ತಮ್ಮಯ್ಯ, ಪುರೋಹಿತರಾದ ಗಣಪತಿಭಟ್, ನರಸಿಂಹಜೋಯ್ಸ್, ಹರೀಶ್ ಜೋಯ್ಸ್, ಶಿವರಾಂ ಭಟ್, ಪ್ರದೀಪ ಕುಲಕರ್ಣಿ, ಗೋಪಿ ಚರ್ಕವರ್ತಿ, ಪ್ರಕಾಶ್ ಹೋತನಕಟ್ಟೆ, ಪ್ರದೀಪ್ ದೀಕ್ಷಿತ್, ರಮೇಶ್ ನಾಡಿಗ್ ಸಂಡ, ಬಾಲಕೃಷ್ಣ ಜೋಯ್ಸ್, ಗಜಾನನ ಜೋಷಿ, ಆನಂದರಾವ್ ನಾಡಿಗ್, ರಾಘವ, ಸಂಜೀವ ಸಹಿತ ಮಹಿಳಾ ಪ್ರಮುಖರಾದ ರಮಾ ದೀಕ್ಷಿತ್, ರೂಪ ವೆಂಕಟೇಶ್, ವಿಜಯಮ್ಮ, ಗೀತಮ್ಮ, ಜಯಲಕ್ಷ್ಮಿ, ಗೌರಿ, ಪಲ್ಲವಿ, ದಿವ್ಯ, ದೀಪಾ, ವರ್ಷಾ ದೀಕ್ಷಿತ್, ಪದ್ಮಜಾ, ಅನ್ನಪೂರ್ಣ, ಪಲ್ಲವಿ, ಸುಷ್ಮಾ ದೀಕ್ಷಿತ್, ಸುಕನ್ಯಾ ಮತ್ತಿತರು ಭಾಗವಹಿಸಿ ಯಶಸ್ವಿಗೊಳಿಸಿದರು.