ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಪರ್ವ ಶುಕ್ರವಾರ ಸಾವಿರಾರು ಭಕ್ತಾದಿಗಳ ಸಂಭ್ರಮ ಸಡಗರದ ಮಧ್ಯೆ ವೈಭವದಿಂದ ಜರುಗಿತು.
ಏಳು ಗ್ರಾಮಗಳ ಸೀಮೆಯಲ್ಲಿ ನೆಲೆಸಿರುವ ಶ್ರೀ ಮಹಾಲಕ್ಷ್ಮೀ ಮಂದಿರಕ್ಕೆ (ಆಯಿತಳ) ಶುಕ್ರವಾರ ಪರ್ವ ನಿಮಿತ್ತ ಬೆಳಗಿನ ಜಾವ ಶ್ರೀದೇವಿಯ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಆಷಾಢ ಮಾಸದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಭಕ್ತಾದಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಸಹಸ್ರಾರು ಜನ ಭಕ್ತಾದಿಗಳು ಹಾಗೂ ಮಹಿಳೆಯರು ಮಹಾಲಕ್ಷ್ಮೀ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದುಕೊಂಡರು. ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವಜನಾಂಗದವರು ಅತ್ಯಂತ ಶ್ರದ್ಧೆಯಿಂದ ದೇವಿಯ ದರ್ಶನ ಪಡೆದು ಸಹಪಂಕ್ತಿ ಭೋಜನ ಸವಿದರು. ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದ ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಹೆದ್ದಾರಿಯಿಂದ ೧.೫ ಕಿ.ಮೀ. ದೂರ ನಡೆದು ಭಕ್ತರು ದೇವಿ ದರ್ಶನ ಪಡೆದುಕೊಂಡರು. ಜೇವರ್ಗಿ, ಸುತ್ತಲಿನ ಹತ್ತಾರು ಗ್ರಾಮಗಳ ಮಹಿಳೆಯರು ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ವಿವಿಧ ಭಕ್ಷ ಭೋಜನಗಳನ್ನು ತಂದು ದೇವಿಗೆ ನೈವೈದ್ಯ ಅರ್ಪಿಸಿ ಭೋಜನ ಸವಿದರು.
ಮಹಾಲಕ್ಷ್ಮೀ ಪರ್ವ ನಿಮಿತ್ತ ಶುಕ್ರವಾರ ಬೆಳಗಿನ ಜಾವದಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಳ್ಳುತ್ತಿರುವುದು ಕಂಡು ಬಂದಿತು. ಅನೇಕ ಭಕ್ತರು ದೇವಿಗೆ ಸೀರೆ ಉಡಿಸಿದರು. ದೇವಿಯ ಹರಕೆ ತೀರಿಸಲು ಸಿಡಿಗಾಯಿ ಒಡೆದರು. ಬೆಳಿಗ್ಗೆಯಿಂದ ಭಕ್ತರು ಆಯಿತಳಕ್ಕೆ ತೆರಳುತ್ತಿರುವುದು ಕಂಡು ಬಂದಿತು.ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಟ್ರಸ್ಟ್ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಕಾರ್ಯದರ್ಶಿ ರಮೇಶಬಾಬು ವಕೀಲ್, ಮಲ್ಲಶೆಟ್ಟೆಪ್ಪಗೌಡ ಹಿರೆಗೌಡ, ಭಕ್ತರು ಪಾಲ್ಗೊಂಡಿದ್ದರು.