ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಶ್ರೀಅವಧೂತ ಶುಖಮನಿ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ದಿನ ಶುಖಮುನಿ ಸ್ವಾಮಿಗಳ ಭಾವಚಿತ್ರ ಮೆರವಣಿಗೆ, ಸಪ್ತಭಜನೆ ಹಾಗೂ ಪಲ್ಲಕ್ಕಿ ಉತ್ಸವ, ಅನ್ನದಾಸೋಹ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಅಧಿಕೃತವಾಗಿ ಚಾಲನೆಗೊಂಡವು.
ನಂತರ ಸಪ್ತಭಜನೆ,ಶುಖಮುನಿ ಸ್ವಾಮಿಗಳ ಮೂರ್ತಿಗೆ ವಿಶೇಷ ಅಭಿಷೇಕ,ಪೂಜೆ ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಬೆಳಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಶುಖಮುನಿ ತಾತನ ಪಲ್ಲಕ್ಕಿ ಉತ್ಸವವೂ ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಗಿ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆಯೊಂದಿಗೆ ಸಂಚರಿಸಿತು.ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪಲ್ಲಕ್ಕಿ ಹಾಗೂ ಶುಖಮುನಿ ದೇವರಿಗೆ ಹೂಮಾಲೆ ಅರ್ಪಿಸುವ ಮೂಲಕ ವಿಶೇಷ ಪೂಜೆ ನೆರವೇರಸಿದರು.
ಮಂಗಳವಾರ ಆರಂಭವಾದ ಪಲ್ಲಕ್ಕಿ ಉತ್ಸವ ಒಂದು ವಾರಗಳ ಕಾಲ ದೋಟಿಹಾಳ,ಕೇಸೂರು ಹೆಸರೂರು, ಮಾಟೂರು, ಜಾಲಿಹಾಳ, ರ್ಯಾವಣಕಿ, ಕಲಕೇರಿ, ನಡುವಲಕೊಪ್ಪಕ್ಕೆ ಪಲ್ಲಕ್ಕಿ ಸಂಚರಿಸುತ್ತಿದ್ದು ಆಯಾ ಗ್ರಾಮದ ಭಕ್ತರು ಪೂಜೆ ಸಲ್ಲಿಸುವ ಮೂಲಕ ಭಕ್ತವೃಂದಕ್ಕೆ ಅನ್ನದಾಸೋಹ ಸೇವೆ ಸಲ್ಲಿಸಲಿದ್ದಾರೆ.ಅಲ್ಲಿಂದ ಸಾವಿರಾರು ಭಕ್ತರು ಆಗಮಿಸಿ ಮಠಕ್ಕೆ ಆಹಾರ ದವಸ ಧಾನ್ಯ ಸಮರ್ಪಣೆ ಮಾಡುವ ಮೂಲಕ ಭಕ್ತಿಯಿಂದ ಮೆರೆಯುತ್ತಾರೆ.
ಪಲ್ಲಕ್ಕಿ ಉತ್ಸವ ಉಸ್ತುವಾರಿ ಜವಾಬ್ದಾರಿ ಸ್ಥಳೀಯ ಯುವಕ ಸಂಘ-ಸಂಸ್ಥೆಗಳಿಗೆ ನೀಡಲಾಗಿದ್ದು, ಪ್ರತಿದಿನ ಸಂಘದ ಸದಸ್ಯರ ಸಮ್ಮುಖದಲ್ಲಿ ಬೆಳಗ್ಗೆ ಮತ್ತು ರಾತ್ರಿ ತಾತನ ಪಲ್ಲಕ್ಕಿ ಉತ್ಸವ ಅದ್ಧೂರಿಯಿಂದ ನಡೆಯುತ್ತದೆ. ಪ್ರತಿದಿನ ಒಂದೊಂದು ಸಂಘಟನೆ ಸದಸ್ಯರ ಸಮ್ಮುಖದಲ್ಲಿ ಬೆಳಗ್ಗೆ ಮತ್ತು ರಾತ್ರಿ ತಾತನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.ವಿಡಿಯೋ ಚಿತ್ರೀಕರಣ:
ಅವಧೂತ ಶುಖಮುನಿ ತಾತನ ಪಲ್ಲಕ್ಕಿ ಉತ್ಸವದಲ್ಲಿ ಅವಘಡಗಳು ಉಂಟಾಗಬಾರದೆಂಬ ಉದ್ದೇಶದಿಂದ ಮುಂಜಾಗೃತೆಯಾಗಿ ತಹಸೀಲ್ದಾರ ನಿರ್ದೇಶನದಂತೆ ಪೋಲಿಸ ಇಲಾಖೆಯವರು ಸಿಬ್ಬಂದಿ ನಿಯೋಜಿಸಿ ಪಲ್ಲಕ್ಕಿ ಉತ್ಸವವೂ ಸಂಪೂರ್ಣವಾಗಿ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಲಿದ್ದಾರೆ.ದೋಟಿಹಾಳ ಅವಧೂತ ಶುಖಮುನಿ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರು ಕಾಣಿಕೆ ಹಾಗೂ ದವಸ ಧಾನ್ಯ ಕೊಡುವವರು ಕಮಿಟಿಯಲ್ಲಿ ನೀಡಿ ರಶೀದಿ ಪಡೆಯಬೇಕು ಸ್ವಯಂ ಪ್ರೇರಿತರಾಗಿ ಅಡುಗೆ ತಯಾರಿಸಲು ಅವಕಾಶ ಇರುವದಿಲ್ಲ ದಾಸೋಹದಲ್ಲಿ ಅಡುಗೆ ಮಾಡಿಸುವವರು ಕಮಿಟಿಯ ಗಮನಕ್ಕೆ ತರಬೇಕು ಎಂದು ದೇವಸ್ಥಾನದ ಕಮಿಟಿಯವರು ತಿಳಿಸಿದರು.