ಸಪ್ತಭಜನೆ, ಶುಖಮುನಿ ಸ್ವಾಮಿಗಳ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರಗಳು ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಮೊದಲ ದಿನದಂದು ಸಪ್ತಭಜನೆ ಹಾಗೂ ಪಲ್ಲಕ್ಕಿ ಉತ್ಸವ, ಅನ್ನದಾಸೋಹ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದವು.
ಭಾನುವಾರದ ಬೆಳಗಿನ ಜಾವ ಅವಧೂತ ಶುಖಮುನಿ ಸ್ವಾಮಿಗಳ ಭಾವಚಿತ್ರವನ್ನು ದೋಟಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆಯ ಮೂಲಕ ಸಂಚರಿಸಿ ಮೆರವಣಿಗೆ ನಡೆಸಲಾಯಿತು. ಸಪ್ತಭಜನೆ, ಶುಖಮುನಿ ಸ್ವಾಮಿಗಳ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರಗಳು ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಪಲ್ಲಕ್ಕಿ ಉತ್ಸವವು ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಗಿ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಭಾನುವಾರ ಆರಂಭವಾದ ಪಲ್ಲಕ್ಕಿ ಉತ್ಸವ ಒಂದು ವಾರಗಳ ಕಾಲ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಹೆಸರೂರು, ಮಾಟೂರು, ಜಾಲಿಹಾಳ, ರ್ಯಾವಣಕಿ, ಕಲಕೇರಿ, ನಡುವಲಕೊಪ್ಪಕ್ಕೆ ತೆರಳಿ ತಾತನ ಪಲ್ಲಕ್ಕಿ ಸಂಚರಿಸುತ್ತದೆ ಅಲ್ಲಿಂದ ಸಾವಿರಾರು ಭಕ್ತರು ಆಗಮಿಸಿ ಮಠಕ್ಕೆ ಆಹಾರ ದವಸ ಧಾನ್ಯಗಳನ್ನು ಸಮರ್ಪಣೆ ಮಾಡುವ ಮೂಲಕ ಭಕ್ತಿಯಿಂದ ಮೆರೆಯುತ್ತಾರೆ.ಎಂಟು ದಿನಗಳ ಕಾಲ ನಡೆಯುವ ಈ ಪಲ್ಲಕ್ಕಿ ಉತ್ಸವ ಉಸ್ತುವಾರಿ ಜವಾಬ್ದಾರಿಯನ್ನು ಸ್ಥಳೀಯ ಯುವಕ ಸಂಘ ಸಂಸ್ಥೆಗಳಿಗೆ ನೀಡಲಾಗಿದ್ದು, ಪ್ರತಿದಿನ ಸಂಘದ ಸದಸ್ಯರ ಸಮ್ಮುಖದಲ್ಲಿ ಬೆಳಗ್ಗೆ ಮತ್ತು ರಾತ್ರಿ ತಾತನ ಪಲ್ಲಕ್ಕಿ ಉತ್ಸವ ಅದ್ಧೂರಿಯಿಂದ ನಡೆಯುತ್ತದೆ. ಪ್ರತಿದಿನ ಒಂದೊಂದು ಸಂಘದ ಸದಸ್ಯರ ಸಮುಖದಲ್ಲಿ ಬೆಳಗ್ಗೆ ಮತ್ತು ರಾತ್ರಿ ತಾತನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.ದೋಟಿಹಾಳ, ಕೇಸೂರು ಗ್ರಾಪಂಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಜೋಡಣೆ, ಚರಂಡಿಗಳ ಸ್ವಚ್ಛತೆ ಮತ್ತು ಸಾರ್ವಜನಿಕರ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಜಾತ್ರೆಗೆ ಬಂದಿರುವ ಭಕ್ತರಿಗೆ ಅಸ್ತ ವ್ಯಸ್ತವಾಗಬಾರದು ಎಲ್ಲ ಸೂಕ್ತ ಕ್ರಮ ಕೈಗೊಂಡಿದ್ದಾರೆ.ದೋಟಿಹಾಳ, ಕೇಸೂರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಕಾಣಿಕೆ, ದವಸ ಧಾನ್ಯಗಳನ್ನು ಕೊಡುವವರು ಕಮಿಟಿಯಲ್ಲಿ ನೀಡಿ ರಶೀದಿ ಪಡೆಯಬೇಕು. ಜತೆಗೆ ಯಾರು ಸಹ ಸ್ವಯಂ ಪ್ರೇರಿತರಾಗಿ ಅಡುಗೆ ತಯಾರಿಸಲು ಅವಕಾಶ ಇರುವುದಿಲ್ಲ. ಏನೇ ಅಡುಗೆ ಮಾಡಬೇಕಾದರೂ ಕಮಿಟಿಯ ಗಮನಕ್ಕೆ ತರಬೇಕು ಎಂದು ಮಠದ ಕಮಿಟಿಯವರು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.