ದೊಡ್ಡಬಳ್ಳಾಪುರ: ಸಿದ್ಧಗಂಗೆಯ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಾಪಿಸಿದ ಹಲವು ವಿದ್ಯಾಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡಿ, ನಾಡಿನ ಶೈಕ್ಷಣಿಕ ವಲಯದಲ್ಲಿ ವಿಶಿಷ್ಟ ಛಾಪು ಮೂಡಿಸಿವೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಚ್.ಎಸ್.ಬಸವರಾಜ್ ಹೇಳಿದರು.
ಈ ಭಾಗದಲ್ಲಿ ಪ್ರೌಢಶಾಲೆಯನ್ನು ತೆರೆದ ಪರಿಣಾಮ ಎಲ್ಲ ವರ್ಗಗಳ ಜನತೆಗೆ ಅನುಕೂಲವಾಯಿತು. 16 ವರ್ಷಗಳ ಕಾಲ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಸಾರ್ಥಕತೆ ತಮ್ಮದು ಎಂದು ಹೇಳಿದರು.
ಈ ಪ್ರೌಢಶಾಲೆಗೆ ಸುತ್ತಮುತ್ತಲಿನ 15, 20 ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಉತ್ತಮವಾದ ವಿದ್ಯಾಭ್ಯಾಸದ ಜೊತೆಗೆ ಆಚಾರ ವಿಚಾರದೊಂದಿಗೆ ಆದರ್ಶ, ಸಂಸ್ಕಾರವಂತ ವಿದ್ಯಾರ್ಥಿಗಳನ್ನು ನಮ್ಮ ಶಾಲೆಯು ರೂಪಿಸುತ್ತಿತ್ತು ಎಂದರು. ಸುಮಾರು 30 ವರ್ಷಗಳ ನಂತರ ನಡೆಯುತ್ತಿರುವ ಗುರುವಂದನೆ, ಸ್ನೇಹ ಸಮ್ಮಿಲನ ಗುಣಾತ್ಮಕ ಗುರು- ಶಿಷ್ಯ ಪರಂಪರೆಯ ಪ್ರತೀಕವಾಗಿದೆ ಎಂದರು.ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಪೂರ್ಣಕುಂಭ ಮೆರವಣಿಗೆ ನಡೆಯಿತು. ಎಲ್ಲ ಅಧ್ಯಾಪಕರುಗಳಿಗೆ ಸನ್ಮಾನ ನಡೆಯಿತು. ಬಳಿಕ, ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ನಿವೃತ್ತ ಶಿಕ್ಷಕರುಗಳಾದ ಟಿ.ಎಂ. ವಾಗೀಶ್ ಚಕ್ರೇಶ್ವರ್, ಎಸ್. ರುದ್ರೇಶ್, ಎಂ.ವಿ.ಶಿವರುದ್ರಯ್ಯ, ಎಂ. ಶಿವಣ್ಣ, ಎಚ್.ಪ್ರಭುದೇವ್, ಕೆ.ಬಿ.ಶಿವಶಂಕರಯ್ಯ, ಸಿ.ವಿ. ಬಸವರಾಜು, ಜಿ.ಬಿ.ಶೇಖರ್, ಎಸ್.ಕೆ.ಸಿ.ಶೇಖರ್, ಎಚ್. ಮೃತ್ಯುಂಜಯ ಭಾಗವಹಿಸಿದ್ದರು.