ಇವತ್ತೇ ರವಿಯಣ್ಣ ಮನೆಗೆ ಸಿದ್ದಣ್ಣನ ಕರೆ ತರೋಕೆ ಸಿದ್ಧ!

KannadaprabhaNewsNetwork |  
Published : Oct 11, 2024, 11:45 PM IST

ಸಾರಾಂಶ

ದಾವಣಗೆರೆ ಜಿಲ್ಲಾ ಬಿಜೆಪಿಗೆ ಎಸ್.ಎ. ರವೀಂದ್ರನಾಥ, ಡಾ.ಜಿ.ಎಂ. ಸಿದ್ದೇಶ್ವರ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ನಾಯಕರು ಒಂದಾಗಲೆಂಬ ಆಸೆ ಎಲ್ಲರಿಗೂ ಇದ್ದು, ಇದಕ್ಕಾಗಿ ರವೀಂದ್ರನಾಥರ ನಿವಾಸಕ್ಕೆ ಸಿದ್ದೇಶ್ವರರನ್ನು ನಾವು ಕರೆ ತರಲು ಸಿದ್ಧ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ. ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ಬಿಜೆಪಿಗೆ ಎಸ್.ಎ. ರವೀಂದ್ರನಾಥ, ಡಾ.ಜಿ.ಎಂ. ಸಿದ್ದೇಶ್ವರ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ನಾಯಕರು ಒಂದಾಗಲೆಂಬ ಆಸೆ ಎಲ್ಲರಿಗೂ ಇದ್ದು, ಇದಕ್ಕಾಗಿ ರವೀಂದ್ರನಾಥರ ನಿವಾಸಕ್ಕೆ ಸಿದ್ದೇಶ್ವರರನ್ನು ನಾವು ಕರೆ ತರಲು ಸಿದ್ಧ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ. ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ನಾಯಕರಾದ ರವೀಂದ್ರನಾಥ-ಸಿದ್ದೇಶ್ವರರ ಮಧ್ಯೆ ಗೊಂದಲ ಸೃಷ್ಟಿಸುತ್ತಾ, ಕಾರ್ಯಕರ್ತರಲ್ಲಿ ಬೇಸರ ಮೂಡಿಸುವ ಕೆಲಸವನ್ನು ಕೆಲ ಮುಖಂಡರು ಮಾಡುತ್ತಿರುವುದು ಸರಿಯಲ್ಲ. ಮಾಧ್ಯಮಗಳ ಮುಂದೆ ನಾಟಕ ಮಾಡುವುದು ಬೇಡ. ಇಬ್ಬರೂ ನಾಯಕರು ಒಂದಾಗಬೇಕೆಂಬ ಆಸೆ ಇದ್ದರೆ ಹೇಳಿ, ನಾಳೆಯೇ ರವಿಯಣ್ಣನವರ ಮನೆಗೆ ಸಿದ್ದೇಶಣ್ಣರನ್ನು ನಾವು ಕರೆ ತರುತ್ತೇವೆ ಎಂದರು.

ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಸಂಸದರಾಗಲು ಮತ್ತು ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ರವೀಂದ್ರನಾಥ ಕಾರಣ. ರವಿಯಣ್ಣ ಜತೆಗೆ ಸಿದ್ದೇಶ್ವರರ ಕೊಡುಗೆಯೂ ಸಾಕಷ್ಟು ಇದೆಯೆಂಬುದನ್ನು ಟೀಕಿಸುವವರು ಮರೆಯಬಾರದು. ಸಿದ್ದೇಶ್ವರರು ನಾಲ್ಕು ಸಲ ಸತತವಾಗಿ ಸಂಸದರಾಗಿದ್ದು, ಯಾವುದೇ ಕೊಡುಗೆ ಇಲ್ಲದೇ ನಾಲ್ಕು ಸಲ ಸಂಸದರಾಗಿದ್ದಾರೆಯೇ? ರವೀಂದ್ರನಾಥ್‌ರ ಜತೆಗೆ ಸಿದ್ದೇಶ್ವರ ಸಹ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ದುಡಿದಿದ್ದಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಸರಿಯಲ್ಲ

ಸಮಸ್ಯೆ ಇದ್ದರೆ ನೇರವಾಗಿ ರಾಜ್ಯ, ರಾಷ್ಟ್ರ ನಾಯಕರ ಬಳಿ ಹೇಳಬೇಕೆ ಹೊರತು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ, ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಲ್ಲ. ಪಕ್ಷದ ಚೌಕಟ್ಟಿನಲ್ಲೇ ಸಮಸ್ಯೆ ಪರಿಹರಿಸಿಕೊಳ್ಳೋಣ. ಪಕ್ಷದ ಒಳಗಿನ ವಿಚಾರ ಬಹಿರಂಗವಾಗಿ ಮಾತನಾಡುವುದು ಬೇಡ. ಮಾಧ್ಯಮಗಳ ಮುಂದೆ ಬರುವುದು ಶಿಸ್ತಿನ ಪಕ್ಷ ಬಿಜೆಪಿಗೆ ಶೋಭೆ ತರುವುದಿಲ್ಲ ಎಂದು ರಾಜನಹಳ್ಳಿ ಶಿವಕುಮಾರ ಮನವಿ ಮಾಡಿದರು.

ವರಿಷ್ಟರ ಮುಂದೆ ಬನ್ನಿ. ನಿಜವಾಗಲೂ ಇಬ್ಬರೂ ನಾಯಕರು ಒಂದಾಗಲೆಂಬ ಮನಸ್ಸು ನಿಮಗಿದ್ದರೆ ರವೀಂದ್ರನಾಥರ ಮನೆಗೆ ಬನ್ನಿ. ನಾವೂ ಸಿದ್ದೇಶ್ವರರನ್ನು ಕರೆ ತರುತ್ತೇವೆ. ಎಲ್ಲದಕ್ಕೂ ಅಂತ್ಯ ಹಾಡೋಣ, ಮುಂಬರುವ ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.

ಬಿಜೆಪಿ ಕಾರ್ಯಕರ್ತರು ಸೋಲಿಗೆ ಎದೆಗುಂದಲ್ಲನಮಗಾಗಲೀ, ನಮ್ಮ ಪಕ್ಷದ ನಾಯಕರಿಗಾಗಲೀ, ಪಕ್ಷಕ್ಕಾಗಲೀ ಸೋಲು ಹೊಸದೇನೂ ಅಲ್ಲ. ಅದೇ ರೀತಿ ಸೋಲು-ಗೆಲುವಿಗೆ ನಮ್ಮ ಕಾರ್ಯಕರ್ತರು ಎದೆಗುಂದುವುದೂ ಇಲ್ಲ. ಮತ್ತೆ ಗೆದ್ದೇ ಗೆಲ್ಲುತ್ತೇವೆ. ಲೋಕಸಭೆ ಚುನಾವಣೆಯೂ ಮುಗಿದಿದೆ. ಹೀಗಿದ್ದರೂ ಮತ್ತೆ ಮತ್ತೆ ಗೊಂದಲ ಹುಟ್ಟು ಹಾಕುವುದು ಏಕೆ? ಪಕ್ಷದ ವರಿಷ್ಟರು ಜಿಲ್ಲಾ ಬಿಜೆಪಿಯ ಗೊಂದಲ ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರವೀಂದ್ರನಾಥ ಜಿಲ್ಲಾ ಬಿಜೆಪಿಗೆ ಭೀಷ್ಮನಂತಿದ್ದಾರೆ. ರವಿಯಣ್ಣ ಬಗ್ಗೆ ನಮಗೂ ಅಪಾರ ಗೌರವ ಇದೆ. ಇಂತಹ ಹಿರಿಯರನ್ನು ನಿಮ್ಮ ಸ್ವಾರ್ಥಕ್ಕಾಗಿ ಮಧ್ಯೆ ತರಬೇಡಿ. ಈ ಇಬ್ಬರೂ ಒಂದಾದರೆ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಹಳೆ ಲಯ ಕಂಡುಕೊಳ್ಳುತ್ತದೆ. ಮುಂಬರುವ ಪಾಲಿಕೆ, ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಜ್ಜಾಗಬೇಕು ರಾಜನಹಳ್ಳಿ ಶಿವಕುಮಾರ ತಿಳಿಸಿದರು.ಪಕ್ಷಾತೀತವಾಗಿ ಎಲ್ಲಾ ನಾಯಕರ ಮೇಲೆ ಗೌರವವಿದೆ

ಬಿ.ಜಿ. ಅಜಯಕುಮಾರಗೆ ತಿರುಗೇಟುದಾವಣಗೆರೆ: ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ದಿವಂಗತ ಪಂಪಾಪತಿ, ದಿವಂಗತ ಎಚ್.ಶಿವಪ್ಪ, ದಿವಂಗತ ಕೆ. ಮಲ್ಲಪ್ಪ ಸೇರಿದಂತೆ ಅನೇಕ ಇತರ ನಾಯಕರ ಮೇಲೆ ನಮಗೆ ಪಕ್ಷಾತೀತವಾಗಿ ಅಭಿಮಾನ, ಗೌರವವಿದ ಎಂದು ಬಿಜೆಪಿ ಯುವ ಮುಖಂಡ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾಜಿ ಮೇಯರ್ ಬಿ.ಜಿ. ಅಜಯಕುಮಾರಗೆ ಟಾಂಗ್ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಚಿಕ್ಕವರು. ಪಕ್ಷ ವಿರೋಧ, ವೈಚಾರಿಕ ವಿರೋಧ ಇದ್ದರೂ, ಹಿರಿಯರ ಅನುಭವದ ಗೌರವ ನೀಡುತ್ತೇವೆ. ಆ ಪಕ್ಷಗಳು ತಪ್ಪು ಮಾಡಿದಾಗ ವಿರೋಧ ಮಾಡಿದ್ದೇವೆ. ಆದರೆ, ಯಾವುದೇ ಹಿರಿಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ ಎಂದರು.

ದಕ್ಷಿಣ ಕ್ಷೇತ್ರದ ಚುನಾವಣೆ ವೇಳೆ ಶಾಮನೂರು ಶಿವಶಂಕರಪ್ಪನವರ ಬಗ್ಗೆ ನೀವು ಆಡಿದ್ದ ಏಕವಚನದ ಮಾತುಗಳೇ ನಿಮ್ಮ ಸೋಲಿಗೆ ಕಾರಣವೆ ಹೊರತು ಬೇರೇನೂ ಅಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಮುಖಂಡರು, ಕಾರ್ಯಕರ್ತರು ದಕ್ಷಿಣದಲ್ಲಿ ಅಜಯಕುಮಾರ ಅವರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ನಮಗೆ ಕಮಲವೇ, ಭಾರತ ಮಾತೆಯೇ ತಾಯಿ. ತಾಯಿಗೆ ಮೋಸ ಮಾಡುವ ಕಾರ್ಯಕರ್ತರು ನಾವಲ್ಲ. ರಾಜಕೀಯವಾಗಿ ಬೆಳೆಯಿರಿ ಮಾರ್ಮಿಕವಾಗಿ ನುಡಿದರು.

ಪಕ್ಷದ ಮುಖಂಡರಾದ ಆರ್.ಎಲ್.ಶಿವಪ್ರಕಾಶ, ಶಂಕರಗೌಡ ಬಿರಾದಾರ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ನೀಲಗುಂದ ರಾಜು, ಬಾಲರಾಜ, ಮಂಜಾನಾಯ್ಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ