ಸಿದ್ದಾಪುರ: ವಾರಾಹಿ ನೀರಿಗಾಗಿ ಬೃಹತ್ ಜನಾಂದೋಲನಕ್ಕೆ ಸಿದ್ಧತೆ

KannadaprabhaNewsNetwork | Published : Jul 10, 2024 12:41 AM

ಸಾರಾಂಶ

ವಾರಾಹಿ ನೀರಿಗಾಗಿ ಬೃಹತ್ ಜನಾಂದೋಲನಕ್ಕೆ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಆ.15ರ ನಂತರ ಬೃಹತ್ ಜಾನಾಂದೋಲನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅದಕ್ಕೆ ಮೊದಲು ಸಮಗ್ರ ಹೋರಾಟ ರೂಪಿಸಲು ಸಮಿತಿ ರಚನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೈಂದೂರು

ವಾರಾಹಿ‌ ನದಿ ನೀರಾವರಿ ಯೋಜನೆ ಬೈಂದೂರು ‌ಕ್ಷೇತ್ರ ವ್ಯಾಪ್ತಿಯಲ್ಲಿ ‌ಇದ್ದರೂ ಇಲ್ಲಿನ ಯಾವುದೇ ಗ್ರಾಮಕ್ಕೆ ಇದರ ನೀರು ಸಿಗುತ್ತಿಲ್ಲ. ಆದ್ದರಿಂದ ಬೈಂದೂರು ಕ್ಷೇತ್ರಕ್ಕಾಗುತ್ತಿರುವ ಈ ಅನ್ಯಾಯವನ್ನು ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲ ರೂಪಿಸಿಲು ಪೂರ್ವ ಸಿದ್ಧತಾ ಸಭೆ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ಮಂಗಳವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ವಾರಾಹಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ, ಜಿಲ್ಲೆಯ ಕಾಪು, ಕಾರ್ಕಳ, ಹೆಬ್ರಿ, ಉಡುಪಿ, ಉಡುಪಿ ನಗರಕ್ಕೆ ನೀರು ನೀಡಲು ಉದ್ದೇಶಿಸಲಾಗಿದೆ. ಬೈಂದೂರಿನ ಯಾವುದೇ ಗ್ರಾಮಕ್ಕೆ ಇದರ ಪ್ರಯೋಜನ ಆಗುತ್ತಿಲ್ಲ. ಇಲ್ಲಿನ ನೀರು ಬೇರೆ ತಾಲೂಕುಗಳಿಗೆ ಹೋಗುವಂತೆಯೇ ಬೈಂದೂರು ತಾಲೂಕಿಗೂ ಸಿಗಬೇಕು. ವಾರಾಹಿ ಬಲದಂಡೆ ಯೋಜನೆಯ ಮೂಲಕ ಕಾಲುವೆಗಳಿಂದ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಪೂರೈಕೆ ಆಗಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ವೇಗ ಸಿಗಬೇಕು. ಈ ಹಿನ್ನೆಲೆಯಲ್ಲಿ ಈ ಹೋರಾಟ ರೂಪಿಸಲಾಗುತ್ತಿದೆ ಎಂದರು.

ಆ.15ರ ನಂತರ ಬೃಹತ್ ಜಾನಾಂದೋಲನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅದಕ್ಕೆ ಮೊದಲು ಸಮಗ್ರ ಹೋರಾಟ ರೂಪಿಸಲು ಸಮಿತಿ ರಚನೆ ಮಾಡಲಾಗಿದೆ.

ಪ್ರತಿ ಗ್ರಾಮದಲ್ಲೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ವಾರಾಹಿ ಯೋಜನೆಯಲ್ಲಿ ಬೈಂದೂರಿಗೆ ಆಗಿರುವ ಅನ್ಯಾಯ, ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಮುಖರಾದ ಉಮೇಶ್ ಕಲ್ಗದ್ದೆ, ಸತೀಶ್ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರಾಣೇಶ್, ರವಿಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಸುಧಾಕರ್ ಕುಲಾಲ್,ಬಾಲಚಂದ್ರ ಭಟ್ ಹಟ್ಟಿಯಂಗಡಿ ರಾಜೀವ್ ಶೆಟ್ಟಿ, ಹಕ್ಲಾಡಿ ಶುಭಾಶ್ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಹರ್ಷ ಮೊಗವೀರ ಸಿದ್ದಾಪುರ, ಕೃಷ್ಣ ಪೂಜಾರಿ, ರವಿ ಕುಲಾಲ್ ಸೇರಿದಂತೆ ಸುಮಾರು 25 ಗ್ರಾಮ ಪಂಚಾಯಿತಿಗಳ ಮುಖಂಡರು ಭಾಗವಹಿಸಿ, ಹೋರಾಟದ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

Share this article