ಕನ್ನಡಪ್ರಭ ವಾರ್ತೆ ಹಾಸನ
ಸಿದ್ದರಾಮಯ್ಯ ಸರ್ಕಾರ ಎಡಬಿಡಂಗಿ ಸರ್ಕಾರ, ಗೂಂಡಾ ಶೈಲಿಯಲ್ಲಿ ಆಡಳಿತ ನಡೆಸುತ್ತಿದೆ. ಜಾತಿಗಣತಿ ನಾಟಕದಿಂದ ತಮ್ಮ ಸರ್ಕಾರದ ವೈಫಲ್ಯ ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.ಹಾಸನಾಂಬೆ ದೇವಿಯ ದರ್ಶನ ಪಡೆದ ನಂತರ ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಎಂಬ ಹೆಸರಿನಲ್ಲಿ ಸರ್ಕಾರ ಜಾತಿ ಆಧಾರಿತ ರಾಜಕೀಯಕ್ಕೆ ಇಂಧನ ಹಾಕುತ್ತಿದೆ. ಹೈಕೋರ್ಟ್ ಸ್ಪಷ್ಟವಾಗಿ ಹೇಳಿದರೂ, ಧಮ್ಕಿ ಹಾಕಿ ಸಮೀಕ್ಷೆ ಮಾಡಿಸುತ್ತಿದ್ದಾರೆ. ಇದು ಸಂವಿಧಾನ ಬಾಹಿರ ನಡೆ ಎಂದು ತೀವ್ರ ಟೀಕೆ ಮಾಡಿದರು. ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೇಳುವಾಗ, “ಹದಿನೈದು ದಿನಗಳಲ್ಲಿ ಮುಗಿಸುತ್ತೇನೆ ಎಂದು ಹಠ ಹಿಡಿದ ಸಿಎಂ ಈಗ ಮೂರನೇ ಬಾರಿಗೆ ಅವಧಿ ವಿಸ್ತರಣೆ ಮಾಡಿದ್ದಾರೆ. ತರಬೇತಿ ಇಲ್ಲ, ಯೋಜನೆ ಇಲ್ಲ, ಬರೀ ಬೆದರಿಕೆ ಇದೆ. ಇದು ಸರ್ಕಾರದ ವೈಫಲ್ಯದ ಕನ್ನಡಿ ಎಂದರು.
ಪಾಪರ್ ಆಗಿದ್ದೀರಾ?:ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ, ಇನ್ಫೋಸಿಸ್ ಉದ್ಯಮಿಗಳಿಗೆ ಡಿ.ಕೆ. ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ. ಇವರು ಕಾಂಗ್ರೆಸ್ನಿಂದ ಸಹಾಯ ಕೇಳಿದವರಲ್ಲ. ಬ್ರಾಂಡ್ ಬೆಂಗಳೂರು ಆಗುವುದಕ್ಕೆ ಕಾರಣರಾದ ನಾಗರಿಕರು ಮತ್ತು ಉದ್ಯಮಿಗಳು. ಬೆಂಗಳೂರಿನ ಗುಂಡಿ ಮುಚ್ಚಲಿಕ್ಕೂ ಹಣ ಇಲ್ಲ ಅಂದ್ರೆ ಪಾಪರ್ ಆಗಿದ್ದೀರಾ? ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ, ೩೦ ಸಾವಿರ ಗುಂಡಿ ಮುಚ್ಚಿದೀನಿ ಅಂತೀರಾ. ಅದಕ್ಕಾಗಿ ಎರಡು ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸುತ್ತಾರೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಮಳೆ ಹಾನಿ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ೩೮೪ ಕೋಟಿ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಸರಿಯಾಗಿ ಬಳಸಿಲ್ಲ. ಇದರಲ್ಲಿ ಲಂಚ ಹೊಡೆಯದಿರಿ. ೧೦೮ ಆ್ಯಂಬುಲೆನ್ಸ್ಗಳು ಕೆಟ್ಟು ನಿಂತಿವೆ. ೬೦೦ ವಾಹನಗಳು ಧೂಳು ಹಿಡಿದಿವೆ. ಸಾಕ್ಷಿ ಕೊಡಲು ನಾನು ಸಿದ್ಧನಿದ್ದೇನೆ ಎಂದರು.ಜಗದೀಶ್ ಶೆಟ್ಟರ್ ಕಾಲದಲ್ಲಿ ಆರ್ಎಸ್ಎಸ್ ಮೇಲೆ ನಿರ್ಬಂಧ ಹೇರಿದ್ದರು ಎಂದು ಹೇಳುತ್ತಾರೆ. ಆಗ ಅದನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಸಹಿ ಹಾಕಿದ್ರಾ? ದಾಖಲೆ ತೋರಲಿ ಎಂದು ಸವಾಲು ಹಾಕಿದರು. ಅಂತೆಯೇ ಪ್ರಿಯಾಂಕ ಖರ್ಗೆ ವಿರುದ್ಧ ಟೀಕಿಸಿದ ಅವರು ಮಾತೆತ್ತಿದರೆ ತಕ್ಷಣ ಆರ್ಎಸ್ಎಸ್ ಅಂತಾರೆ. ನಿಜಕ್ಕೂ ಇದು ನಾಚಿಕೆಗೆ ಕಾರಣ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಶಾಸಕ ಸಿಮೆಂಟ್ ಮಂಜು ಇತರರು ಉಪಸ್ಥಿತರಿದ್ದರು.ಸುಧಾಮೂರ್ತಿ, ನಾರಾಯಣಮೂರ್ತಿ ಕುಟುಂಬದವರ ಮಾಹಿತಿಯನ್ನು ಬಹಿರಂಗಗೊಳಿಸಿರುವ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡರು. ಅವರು ಯಾರದ್ದಾದರೂ ಹಣ ತಿಂದಿದ್ದಾರಾ? ಅವರಿಗೆ ಬೆದರಿಕೆ ಹಾಕುವುದು ಸರ್ಕಾರದ ಕೆಲಸನಾ? ಇದೇನು ರೌಡಿಗಳ ಸರ್ಕಾರನಾ ಎಂದು ಪ್ರಶ್ನಿಸಿದರು. ಹೈಕೋರ್ಟ್ ಹೇಳಿದೆ ಭಾಗವಹಿಸಲು ಇಷ್ಟವಿದ್ದರೆ ಭಾಗವಹಿಸಿ. ಹಾಗಿದ್ದರೂ ದಮ್ಕಿ ಹಾಕುವುದು ಗೂಂಡಾ ರಾಜಕಾರಣ. "ನೀವು ಔಟ್ಗೋಯಿಂಗ್ ಸಿಎಂ ". ಕೇಂದ್ರದಲ್ಲಿ ಹೊಸ ಸಮೀಕ್ಷೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ೧೬೫ ಕೋಟಿ ಹಣ ವ್ಯರ್ಥವಾಗಿದೆ, ಇನ್ನೂ ೪೫೦ ಕೋಟಿ ಜನರ ತೆರಿಗೆ ಹಣ ವ್ಯಯ ಮಾಡುತ್ತಿದ್ದಾರೆ. ಗೌಪ್ಯತೆ ಕಾಪಾಡಬೇಕಾದ ಮಾಹಿತಿಯೇ ಸೋರಿಕೆಯಾಗಿದೆ ಎಂದರು.