ಮುಖ್ಯಮಂತ್ರಿ ವಿರುದ್ಧ ಎಚ್.ಡಿ.ರೇವಣ್ಣ ಕಿಡಿ । ಸಂದೇಶ ಬಂದ ತಕ್ಷಣ ಬಿಜೆಪಿ-ಜೆಡಿಎಸ್ ಒಟ್ಟಿಗೆ ಪ್ರಚಾರಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿನ ಹೊಸೂರ್ ಗಂಗಾಧರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿಗೆ ವಸತಿ ಶಾಲೆಗಳು, ಪ್ರಥಮ ದರ್ಜೆ ಕಾಲೇಜು, ಚೆಸ್ಕಾಂ ವಿಭಾಗ ಕಚೇರಿ, ವಿದ್ಯುತ್ ವಿತರಣಾ ಕೇಂದ್ರಗಳು ಮೊದಲಾದ ಅಭಿವೃದ್ಧಿ ಕಾರ್ಯ ಆಗಿದೆ. ಆಡಳಿತದಲ್ಲಿಯೂ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರನ್ನು ಮಾಡಿದ್ದೇವೆ. ಇಲ್ಲಿನ ಬಿಳಿ ಚೌಡಯ್ಯ ಅವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಒದಗಿಸಿ ಗುರುತಿಸಿದ್ದೆವು. ಶಾಸಕರು ತಮ್ಮದೇ ಪಕ್ಷ ಆಡಳಿತವಿದ್ದು ಬಿಳಿ ಚೌಡಯ್ಯ ಅವರಿಗೆ ಯಾವ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಡಿಸಿದ್ದಾರೆ? ಎಂದು ಪ್ರಶ್ನಿಸಿದರು.
‘ಗಂಗಾ ಕಲ್ಯಾಣ ಯೋಜನೆಯಡಿ ನನ್ನ ಕ್ಷೇತ್ರವೊಂದರಲ್ಲೇ ಪರಿಶಿಷ್ಟ ಜಾತಿ-ಪಂಗಡದವರಿಗೆ ೧ ಸಾವಿರ ಬೋರ್ವೆಲ್ ಕೊರೆಸಿದ್ದೇನೆ. ಜಿಲ್ಲೆಯಲ್ಲಿ ೪ ಸಾವಿರ ಇವೆ. ಇವರು ಅಧಿಕಾರಕ್ಕೆ ಬಂದು ೯ ತಿಂಗಳು ಕಳೆದಿದ್ದರೂ ಕೊಳವೆ ಬಾವಿಗಳಿಗೆ ಕರೆಂಟ್ ಸಂಪರ್ಕ ಕೊಡಲಾಗಿಲ್ಲ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಕಿಡಿಕಾರಿದರು.‘ನಾವು ಕೇವಲ ರಾಜಕೀಯ ಮಾಡುವುದಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿರುವುದಿಲ್ಲ. ರಾಜ್ಯದ ಜನತೆಯ ಒಳಿತಾಗಿ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವ ಉದ್ದೇಶ ಹೊಂದಲಾಗಿದೆ , ಪ್ರಧಾನಿ ಆಗಿದ್ದ ವೇಳೆ ದೇವೇಗೌಡ ಅವರನ್ನು ಕೆಳಗಿಳಿಸಲು ಕುತಂತ್ರ ಮಾಡಿದ ಕಾಂಗ್ರೆಸ್ ಸರ್ಕಾರ ಅಂದಿನಿಂದಲೂ ವಿರೋಧಿ ಪಕ್ಷಗಳನ್ನು ಮುಗಿಸಲು ಹುನ್ನಾರ ಮಾಡಿದೆ’ ಎಂದು ಆರೋಪಿಸಿದರು.ಜೆಡಿಎಸ್ ವತಿಯಿಂದಲೂ ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿಯ ಅಧಿಕೃತ ಘೋಷಣೆಯಾದ ನಂತರ ಎರಡು ಪಕ್ಷದ ಮುಖಂಡರು ಸೇರಿ ಪ್ರಚಾರಕ್ಕೆ ಆಗಮಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.‘ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಬಿಜೆಪಿ, ಎಲ್ಲರು ಹಾಗೂ ದೇವೇಗೌಡರ ಉದ್ದೇಶವಾಗಿದೆ. ಇವತ್ತು ದೇಶದಲ್ಲಿ ನಿಜವಾದ ಕಾಂಗ್ರೆಸ್ ಇಲ್ಲ, ಅವರದು ವಿಪಕ್ಷ ತುಳಿಯುವ ಉದ್ದೇಶ. ಭ್ರಷ್ಟ ಸರ್ಕಾರ ಕಿತ್ತೊಗೆಯುವುದು ನಮ್ಮೆಲ್ಲರ ಉದ್ದೇಶ’ ಎಂದರುಚುನಾವಣೆಯತ್ತ ಗಮನ ಸೆಳೆದು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಯಾವಾಗ ಪ್ರಚಾರ ಪ್ರಾರಂಭಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿ ‘ನಮಗೆ ಮೇಲಿನಿಂದ ಸಂದೇಶ ಬರಲಿ ಎಂದಿದ್ದಾರೆ, ಸಂದೇಶ ಬಂದ ತಕ್ಷಣ ಪ್ರಚಾರ ಪ್ರಾರಂಭಿಸಲಾಗುವುದು. ಮುಖಂಡರು ಸಂಪರ್ಕದಲ್ಲಿ ಇದ್ದಾರೆ. ಈಗಾಗಲೇ ನಾವು ಪ್ರವಾಸ ಮಾಡುತ್ತಿದ್ದೇವೆ, ಪ್ರಜ್ವಲ್ ಸಹ ಅರಸೀಕೆರೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದಾರೆ’ ಎಂದರು
ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ , ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ಮುಖಂಡ ಬಾಣಾವರ ಅಶೋಕ್, ಹೊಸೂರ್ ಗಂಗಾಧರ್ ಇದ್ದರು.ಅರಸೀಕೆರೆ ನಗರದಲ್ಲಿನ ಹೊಸೂರ್ ಗಂಗಾಧರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು.