ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ: ಕೇಂದ್ರ ಸಚಿವ ಸೋಮಣ್ಣ

KannadaprabhaNewsNetwork |  
Published : Sep 26, 2024, 09:53 AM IST
464 | Kannada Prabha

ಸಾರಾಂಶ

ಸಿದ್ದರಾಮಯ್ಯ ಕಾನೂನಿಗೆ ತುಂಬಾ ಗೌರವ ನೀಡುತ್ತಾರೆ. ರಾಜ್ಯದ ಮುಖ್ಯಸ್ಥರಾಗಿ ರಾಜೀನಾಮೆ ಕೊಡಬೇಕು. ಕ್ಲಿನ್‌ಚಿಟ್ ಆಗಿ ಬಂದ ಮೇಲೆ ಬೇಕಾದರೆ ಸಿಎಂ ಆಗಿ ಮುಂದುವರಿಯಲಿ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದ್ದಾರೆ.

ಹುಬ್ಬಳ್ಳಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಹೋಟೆಲನಲ್ಲಿ ರೈಲ್ವೆ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಜತೆಗೆ ಸಾಕಷ್ಟು ಒಡನಾಟ ಹೊಂದಿದ್ದೇನೆ. ಅವರು ಯಾವಾಗಲೂ ತಮ್ಮದು ತೆರೆದ ಪುಸ್ತಕ ಎಂದು ಹೇಳುತ್ತಾರೆ. ಆ ಪುಸ್ತಕದಲ್ಲಿ ಕೆಲವೊಂದಿಷ್ಟು ತಪ್ಪುಗಳಾಗಿವೆ ಎಂದು ಕಾನೂನು ತೋರಿಸಿದೆ. ಸಿದ್ದರಾಮಯ್ಯ ವಿರುದ್ಧ ಇದೀಗ ಎಫ್ಐಆರ್ ದಾಖಲಾಗುತ್ತಿದೆ. ಹೀಗಾಗಿ ಅವರು ರಾಜೀನಾಮೆ ಕೊಡಲೇಬೇಕು. ನಾವೆಲ್ಲರೂ ಕಾನೂನನ್ನು ಗೌರವಿಸುವುದು ಕರ್ತವ್ಯ. ಆ ಕೆಲಸವನ್ನು ಸಿದ್ದರಾಮಯ್ಯ ಕೂಡ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಅವರು ಷಡ್ಯಂತ್ರ ಮಾಡುತ್ತಿದ್ದಾರೆ. ನಮಗೆ ಸಂವಿಧಾನ ಇದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಆದರೆ ಸಂವಿಧಾನ ಕಾಂಗ್ರೆಸ್ಸಿಗರಿಗಷ್ಟೇ ಇಲ್ಲ ಎಂದ ಅವರು, ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂದೇಶವನ್ನು ಪಾಲಿಸುತ್ತಿದ್ದೇವೆ. ಪ್ರಿಯಾಂಕ ಖರ್ಗೆ ಮೊದಲು ಸಂವಿಧಾನ ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸೂರ್ಯ ಚಂದ್ರ ಇರುವವರೆಗೂ ದೇಶಕ್ಕೆ ಸಂವಿಧಾನ, ಕಾನೂನು ಕೊಟ್ಟಿದ್ದಾರೆ. ಅದಕ್ಕೆ ತಲೆ ಬಾಗುವುದು ನಮ್ಮ ಕರ್ತವ್ಯ ಎಂದ ಅವರು, ಸಿದ್ದರಾಮಯ್ಯ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಜತೆ ಸುಮಾರು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಅವರ ಜತೆ ಸಾಕಷ್ಟು ಒಡನಾಟ ಬಲ್ಲವನಾಗಿದ್ದೇನೆ. 2023ರ ಚುನಾವಣೆ ಅವರ ವಿರುದ್ಧವಾಗಿ ಎದುರಿಸಿದ್ದೇನೆ. ಇವರು ಯಾರೇ ಏನೇ ಹೇಳಿದರೂ ಸಿದ್ದರಾಮಯ್ಯ ಕಾನೂನಿಗೆ ತುಂಬಾ ಗೌರವ ನೀಡುತ್ತಾರೆ. ರಾಜ್ಯದ ಮುಖ್ಯಸ್ಥರಾಗಿ ರಾಜೀನಾಮೆ ಕೊಡಬೇಕು. ಕ್ಲಿನ್‌ಚಿಟ್ ಆಗಿ ಬಂದ ಮೇಲೆ ಬೇಕಾದರೆ ಸಿಎಂ ಆಗಿ ಮುಂದುವರಿಯಲಿ. ಸಿದ್ದರಾಮಯ್ಯ ಅವರು ಸದ್ಯದ ಪರಿಸ್ಥಿತಿಗೆ ಗೌರವಿಸಿ, ಕಾನೂನಿಗೆ ತಲೆ ಬಾಗುತ್ತಾರೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. ಸಿದ್ದರಾಮಯ್ಯ ರಾಜೀನಾಮೆಗೆ ಮೊಂಡುತನ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಅದು ಅವರ ಮಾತಲ್ಲ, ಬೇರೆಯವರ ಮಾತು. ಸಿದ್ದರಾಮಯ್ಯ ಅವರು ಆ ರೀತಿ ನಡೆದುಕೊಳ್ಳಲ್ಲ. ಅವರಿಗೆ ಆ ರೀತಿ ಆಗುವುದು ಬೇಡ ಎಂದು ನನ್ನ ಭಾವನೆ. ಇತಿಹಾಸದಲ್ಲಿ ಉಳಿದುಕೊಳ್ಳಿ, ಹಿಂದೆ ಘಟಾನುಘಟಿ ನಾಯಕರು ರಾಜೀನಾಮೆ ನೀಡಿದ ಉದಾಹರಣೆ ನೋಡಿದ್ದೇವೆ ಎಂದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ