ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದ ಸಿದ್ದರಾಮೇಶ್ವರ

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಮಾಜದ ಎಲ್ಲ ವರ್ಗದ ಜನರ ಏಳಿಗೆಗೆ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಶ್ರಮಿಸಿದ್ದು ಅವರ ಶ್ರಮ ಸಂಸ್ಕೃತಿ ಕಾಳಜಿಯ ಎಲ್ಲರೂ ಮನನ ಮಾಡಿಕೊಳ್ಳಬೇಕು ಎಂಉ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ಅವರ ವಚನಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸಿವೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸಿದ್ಧರಾಮೇಶ್ವರರು ವಿಶ್ವ ಮಾನವರಾಗಿದ್ದಾರೆ ಎಂದರು.

ವಚನಗಳು ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿಗಳು ಅವುಗಳ ಆಳ-ಅಗಲ ತಿಳಿದಾಗ ಮಾತ್ರ ಮಹನೀಯರ ಚಿಂತನೆಗಳನ್ನು ಅರ್ಥೈಸಿಕೊಳ್ಳಬಹುದು.

ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಿದ್ಧರಾಮೇಶ್ವರರು ಇಂತಹದೇ ಜಾತಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಜನಿಸಲಿಲ್ಲ. ಅವರ ಕೊಡುಗೆಗಳು ಸಹ ಒಂದು ಜಾತಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದರು ಎಂದರು.

ಭೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಕಾಯಕ ನಿಷ್ಠೆ ಹೊಂದಿದ್ದಾರೆ. ಶಿಕ್ಷಣ ಹಾಗೂ ಸಂಘಟನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಉಪನ್ಯಾಸ ನೀಡಿ, ಸಿದ್ಧರಾಮರು ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಎಲ್ಲರ ಬದುಕನ್ನು ಬೆಳೆಸಿದವರು ಹಾಗೂ ಬೆಳಗಿಸಿದವರು. ಶರಣ ಸಿದ್ಧರಾಮರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಯಾವ ವ್ಯಕ್ತಿ, ವ್ಯಕ್ತಿತ್ವ ಜನಸಮುದಾಯದಲ್ಲಿ ಉಳಿಯುತ್ತದೆಯೋ ಆ ವ್ಯಕ್ತಿಯ ನಡೆ-ನುಡಿ ಚಂದ ಹಾಗೂ ಸತ್ಯವಾಗಿರುತ್ತವೆ ಎಂದರು. ಭಕ್ತನಾದರೆ ಬಸವಣ್ಣನಾಗಬೇಕು. ಜಂಗಮನಾದರೆ ಪ್ರಭುವಿನಂತಾಗಬೇಕು. ಭೋಗಿಯಾದರೆ ನಮ್ಮ ಶ್ರೀಗುರು ಚನ್ನಬಸವಣ್ಣನಂತಾಗಬೇಕು. ಯೋಗಿಯಾದರೆ ನನ್ನಂತಾಗಬೇಕು ಎಂಬ ಸಿದ್ಧರಾಮರ ಆತ್ಮನಿವೇದನೆಯ ಮಾತು ಬಹಳ ಮುಖ್ಯವಾದದು. ಇದು ಸಿದ್ಧರಾಮರ ಗುಣವಿಶೇಷವು ಹೌದು ಎಂದರು.

ಇಂದು ವ್ಯಕ್ತಿ ಪ್ರತಿಷ್ಠೆ, ಆತ್ಮರತಿಗೆ ಒಳಗಾಗಿ ನುಡಿಯುವ ನಾಲಿಗೆ ಮಲಿನತೆಗೆ ಜಾರಿದೆ. ಇನ್ನೊಬ್ಬರನ್ನು ಅಪಮಾನಿಸುವ ನುಡಿ, ವಿಜೃಂಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮರ ಮತ್ತು ಇದೇ ರೀತಿಯಲ್ಲಿ ನುಡಿ ಬಗೆಗೆ ಹೇಳಿದವರ ಆದರ್ಶ ನಮ್ಮದಾಗಬೇಕು. ಆತ್ಮರತಿ, ವ್ಯಕ್ತಿಪ್ರತಿಷ್ಠೆಯೇ ಮೆರೆಯುತ್ತಿರುವ ಈ ಹೊತ್ತಿಗೆ ಸಿದ್ಧರಾಮರ ವಚನಗಳು ಜೀರ್ಣವಾಗುವುದು ಕಷ್ಟ ಎಂದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕಯೋಗಿ ಸಿದ್ಧರಾಮರು ಮಾಡಿದ ಕಾಯಕದಿಂದಾಗಿ ಇಂದು ನಾವು ಸಿದ್ಧರಾಮೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಕಾಯಕದಿಂದ ಕೈಲಾಸ ಕಂಡ ಪುಣ್ಯಾತ್ಮರು ಸಿದ್ಧರಾಮರು ಎಂದು ಅಭಿಪ್ರಾಯಪಟ್ಟರು.

ಶಿವಯೋಗಿ ಸಿದ್ಧರಾಮರು ಕಾಯಕದ ಜೊತೆಗೆ ಹಲವಾರು ವಚನಗಳನ್ನು ರಚನೆ ಮಾಡಿದ್ದಾರೆ. ಕೆರೆ-ಕಟ್ಟೆ, ಬಾವಿ, ರಸ್ತೆ ನಿರ್ಮಾಣ ಸೇರಿದಂತೆ ಸಿದ್ಧರಾಮರು ಪ್ರತಿಪಾದಿಸಿದ ಕಾಯಕವನ್ನು ಇಂದಿಗೂ ಸಮಾಜ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಜಯಂತಿ ಅಂಗವಾಗಿ ಮೊಳಕಾಲ್ಮುರು ತಾಲೂಕು ಚಿಕ್ಕೋಬನಹಳ್ಳಿಯ ಮುರಾರ್ಜಿ ಮತ್ತು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು. ಸಿ.ರಂಗನಾಯ್ಕ್ ನಿರೂಪಿಸಿದರು. ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಕೋಶಾಧ್ಯಕ್ಷ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಬಂಜಾರ ಸಮಾಜದ ನರೇನಹಳ್ಳಿ ಅರುಣ್ ಕುಮಾರ್, ಭೋವಿ ಸಮಾಜದ ಮುಖಂಡರಾದ ಭರತ್, ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article