ಸ್ವಾಮಿಗಳಾದವರು ಪೂರ್ವಾಶ್ರಮದೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ವಾಂತಿ ಮಾಡಿದ್ದನ್ನು ಪುನಃ ನೆಕ್ಕಿದಂತೆ ಎಂಬುದು ಸಿದ್ಧಲಿಂಗ ಶ್ರೀಗಳ ಸ್ಪಷ್ಟ ನಿಲುವಾಗಿತ್ತು.
ಅಣ್ಣಿಗೇರಿ:
ಅಪಘಾತಕ್ಕೀಡಾಗಿ ಒಂದು ತಿಂಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿಯೂ ತಮ್ಮ ಬದುಕಿನಲ್ಲಿ ಒಂದೇ ಒಂದು ಸಲವೂ ಗದಗಿನ ತೋಂಟದ ಸಿದ್ಧಲಿಂಗ ಶ್ರೀಗಳು ಪೂರ್ವಾಶ್ರಮವನ್ನು ನೆನಪಿಸಿಕೊಳ್ಳಲಿಲ್ಲ ಎಂದು ಪ್ರೊ. ಎಸ್.ಎಸ್. ಹರ್ಲಾಪೂರ ಹೇಳಿದರು.
ಪಟ್ಟಣದ ತೋಂಟದಾರ್ಯ ಮಠದಲ್ಲಿ ಸ್ಥಳೀಯ ಬಸವಕೇಂದ್ರ ಹಾಗೂ ಅಣ್ಣಿಗೇರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಆಶ್ರಯದಲ್ಲಿ ನಡೆದ ಶರಣ ಶ್ರಾವಣ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಸ್ವಾಮಿಗಳಾದವರು ಪೂರ್ವಾಶ್ರಮದೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ವಾಂತಿ ಮಾಡಿದ್ದನ್ನು ಪುನಃ ನೆಕ್ಕಿದಂತೆ ಎಂಬುದು ಸಿದ್ಧಲಿಂಗ ಶ್ರೀಗಳ ಸ್ಪಷ್ಟ ನಿಲುವಾಗಿತ್ತು. ಇದನ್ನು ಅವರು ತಮ್ಮ ಪುಸ್ತಕದಲ್ಲಿಯೂ ದಾಖಲಿಸಿದ್ದಾರೆ. ಧರ್ಮ, ಶಿಕ್ಷಣ ಹಾಗೂ ಪರಿಸರಕ್ಕಾಗಿ ಜನಮಾನಸವನ್ನು ಕಟ್ಟುವಲ್ಲಿ ಶ್ರೀಗಳು ಅಹರ್ನಿಶಿ ದುಡಿದಿದ್ದರು ಎಂದು ಸ್ಮರಿಸಿದರು.
ಶ್ರೀಗಳ ಹೋರಾಟ ಕುರಿತು ಮಾತನಾಡಿದ ಮುಖ್ಯಾಧ್ಯಾಪಕ ಎನ್.ಎಸ್. ಮೇಲ್ಮರಿ, ಸಿದ್ಧಲಿಂಗ ಶ್ರೀಗಳು ಜಗದ್ಗುರು ಪಟ್ಟಕ್ಕೆ ಬಂದ ಕೂಡಲೇ ಅಡ್ಡಪಲ್ಲಕ್ಕಿಯನ್ನು ತಿರಸ್ಕರಿಸಿ ವೈಚಾರಿಕತೆಯ ದಿಕ್ಕು ತೋರಿಸಿದರು. ಜಾತ್ರೆಗೆ ಹೊಸ ಸ್ವರೂಪ ಕೊಟ್ಟಿದ್ದರು. ಪೋಸ್ಕೋ, ಕಪ್ಪತಗುಡ್ಡ ಹಾಗೂ ಗೋಕಾಕ ವರದಿ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟರು ಎಂದರು.
ಇದೇ ವೇಳೆ ಸುಮಿತ್ರಾ ಹುಣಸಿಮರದ ನಿರ್ದೇಶನದ "ಉರಿಯ ಗದ್ದುಗೆ " ರೂಪಕವನ್ನು ನಿಂಗಮ್ಮ ಹೂಗಾರ ಶಾಲೆಯ ಮಕ್ಕಳು ಪ್ರದರ್ಶಿಸಿದರು. ಅನ್ನಪೂರ್ಣಾ ಆಕಳವಾಡಿ ಪ್ರಸಾದ ದಾಸೋಹ ನೆರವೇರಿಸಿದರು. ರೇವತಿ ಕರವೀರಮಠ, ಸಾಕ್ಷಿ ಹರ್ಲಾಪೂರ ಸಂಗಡಿಗರು ವಚನ ಪಾರಾಯಣ ನಡೆಸಿದರು. ಡಾ. ಶಾಂತಾ ಲಕ್ಷ್ಮೇಶ್ವರ ವಚನ ಮಂಗಲಗೈದರು. ಕಾರ್ಯಕ್ರಮದಲ್ಲಿ ಪ್ರೊ. ಎಸ್.ಎಸ್. ಹರ್ಲಾಪೂರ ದಂಪತಿಗಳನ್ನು ಸನ್ಮಾನಿಸಲಾಯಿತು. ಲಿಂಗರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಿರಣ ಬೂದಿಹಾಳ, ಮೀನಾಕ್ಷಿ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸವಿತಾ ಡಬರಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.