ಸಕಲೇಶಪುರದಲ್ಲಿ ಭತ್ತ ಬೆಳೆಯುವ ವಿಸ್ತೀರ್ಣ ಗಣನೀಯ ಕುಸಿತ

KannadaprabhaNewsNetwork |  
Published : Aug 13, 2026, 02:00 AM IST
ತಾಲೂಕಿನಲ್ಲಿ ಭತ್ತ ಬೆಳೆಯುವ ವಿಸ್ತಿರ್ಣದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ | Kannada Prabha

ಸಾರಾಂಶ

2025ರಲ್ಲಿ ಭತ್ತ ಬೆಳೆಯುವ ವಿಸ್ತಿರ್ಣದ ಸಂಖ್ಯೆ 5500 ಹೆಕ್ಟೇರ್‌ ಪ್ರದೇಶಕ್ಕೆ ಕುಸಿತಗೊಂಡಿದ್ದರೆ, ಪ್ರಸಕ್ತವರ್ಷ ಕೃಷಿ ಇಲಾಖೆ 5500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಉದ್ದೇಶ ಹೊಂದಿತ್ತಾದರೂ ಜುಲೈ ಅಂತ್ಯಕ್ಕೆ ತಾಲೂಕಿನಲ್ಲಿ ಕೇವಲ 2300 ಹೇಕ್ಟೆರ್ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಒಂದು ಸಾವಿರ ಹೆಕ್ಟೇರ್‌ ಭತ್ತ ನಾಟಿ ಮಾಡ ಬಹುದಾಗಿದ್ದರು ನಮ್ಮ ನಿಗದಿತ ಗುರಿ ತಲುಪುವುದು ಅಸಾಧ್ಯವಾಗಿದ್ದು, ಹೆಚ್ಚೆಂದರೆ 2026ರಲ್ಲಿ 3500 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಬಹುದಾಗಿದೆ ಎಂಬ ವರದಿ ಕೃಷಿ ಇಲಾಖೆಯದ್ದು. ಕೇವಲ ಒಂದೂವರೆ ದಶಕದಲ್ಲಿ ತಾಲೂಕಿನಲ್ಲಿ 10500 ಕ್ಟರ್ ಪ್ರದೇಶ ಭತ್ತನಾಟಿಯಿಂದ ವಿಮುಖಗೊಂಡಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಲ್ಲಿ ಭತ್ತ ಬೆಳೆಯುವ ವಿಸ್ತಿರ್ಣದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ತಾಲೂಕಿನಲ್ಲಿ 2010ರಲ್ಲಿ 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು ಎಂದು ಕೃಷಿ ಇಲಾಖೆ ವರದಿ ನೀಡಿದೆ. ಕೃಷಿ ಇಲಾಖೆಯ ಇದೆ 2015ರ ವೇಳೆಗೆ ಭತ್ತ ಬೆಳೆಯುವ ಪ್ರದೇಶ 11 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಕುಸಿತಗೊಂಡಿದೆ ಎಂದು ಸಾರಿತ್ತು. 2020 ರ ವೇಳೆಗೆ ಭತ್ತ ಬೆಳೆಯುವ ವಿಸ್ತೀರ್ಣದ ಸಂಖ್ಯೆ 9000 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಕುಸಿತಗೊಂಡಿದೆ ಎನ್ನಲಾದರೆ, 2023ರಲ್ಲಿ ಭತ್ತ ಬೆಳೆಯುವ ಪ್ರದೇಶದ ವಿಸ್ತಿರ್ಣದ ಸಂಖ್ಯೆ 7500 ಹೆಕ್ಟೇರ್‌ ಪ್ರದೇಶಕ್ಕೆ ಕುಸಿತಗೊಂಡಿತ್ತು. 2025ರಲ್ಲಿ ಭತ್ತ ಬೆಳೆಯುವ ವಿಸ್ತಿರ್ಣದ ಸಂಖ್ಯೆ 5500 ಹೆಕ್ಟೇರ್‌ ಪ್ರದೇಶಕ್ಕೆ ಕುಸಿತಗೊಂಡಿದ್ದರೆ, ಪ್ರಸಕ್ತವರ್ಷ ಕೃಷಿ ಇಲಾಖೆ 5500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಉದ್ದೇಶ ಹೊಂದಿತ್ತಾದರೂ ಜುಲೈ ಅಂತ್ಯಕ್ಕೆ ತಾಲೂಕಿನಲ್ಲಿ ಕೇವಲ 2300 ಹೇಕ್ಟೆರ್ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಒಂದು ಸಾವಿರ ಹೆಕ್ಟೇರ್‌ ಭತ್ತ ನಾಟಿ ಮಾಡ ಬಹುದಾಗಿದ್ದರು ನಮ್ಮ ನಿಗದಿತ ಗುರಿ ತಲುಪುವುದು ಅಸಾಧ್ಯವಾಗಿದ್ದು, ಹೆಚ್ಚೆಂದರೆ 2026ರಲ್ಲಿ 3500 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಬಹುದಾಗಿದೆ ಎಂಬ ವರದಿ ಕೃಷಿ ಇಲಾಖೆಯದ್ದು. ಕೇವಲ ಒಂದೂವರೆ ದಶಕದಲ್ಲಿ ತಾಲೂಕಿನಲ್ಲಿ 10500 ಕ್ಟರ್ ಪ್ರದೇಶ ಭತ್ತನಾಟಿಯಿಂದ ವಿಮುಖಗೊಂಡಿದೆ.

ಕಾರಣ:

ಭತ್ತ ಬೆಳೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತಗೊಳ್ಳಲು ಹತ್ತಾರು ಕಾರಣಗಳಿದ್ದು ಇದರಲ್ಲಿ ಮುಖ್ಯವಾಗಿ ತಾಲೂಕಿನಲ್ಲಿ ಅತಿಯಾದ ಮಳೆಯಾಗುವುದರಿಂದ ಭತ್ತದ ಇಳುವರಿ ನಿರೀಕ್ಷಿತ ಮಟ್ಟದಲ್ಲಿಲ್ಲ ಬಯಲು ಪ್ರದೇಶದಲ್ಲಿ ಒಂದು ಹೇಕ್ಟೆರ್ಪ್ರದೇಶದಲ್ಲಿ ಭತ್ತದ ಇಳುವರಿ ಕನಿಷ್ಠ 45ರಿಂದ 60 ಕ್ವಿಂಟಲ್ ಆದರೆ ಮಲೆನಾಡಿನಲ್ಲಿ 30 ರಿಂದ 35 ಕ್ವಿಂಟಲ್ ಮಾತ್ರ ಇದರಿಂದ ಭತ್ತ ಬೆಳೆಯಲು ಮಾಡುವ ಖರ್ಚು ಹುಟ್ಟುವುದಿಲ್ಲ, ಅನಾವಶ್ಯಕ ಶ್ರಮದ ಲೆಕ್ಕಾಚಾರ ಹಾಕುತ್ತಿರುವ ರೈತಾಪಿ ವರ್ಗ ಭತ್ತ ನಾಟಿಯಿಂದ ವಿಮುಖಗೊಳ್ಳುತ್ತಿದ್ದಾರೆ . ಇದಲ್ಲದೆ ಕಾರ್ಮಿಕರ ಕೊರತೆಯು ಮತ್ತೊಂದು ಕಾರಣವಾಗಿದೆ.

ಸ್ಥಳೀಯ ಕಾರ್ಮಿಕರ ಕೊರತೆ ಕಳೆದ ಎರಡು ದಶಕಗಳಿಂದ ತೀವ್ರವಾಗಿದ್ದು ಮೊದಮೊದಲು ಉತ್ತರ ಕರ್ನಾಟಕದ ಜನತೆ ಇಲ್ಲಿನ ಜಮೀನಿನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಇದರ ನಂತರ ಉತ್ತರ ಭಾರತದ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಿದ್ದರಾದರೂ ಕೃಷಿ ಜಮೀನಿಗೆ ಇವರು ಇಳಿಯಲು ಹಿಂದುಮುಂದೆ ನೋಡುತ್ತಾರೆ. ಕೃಷಿ ಕೆಲಸಕ್ಕೆ ಇವರನ್ನು ಇಳಿಸಿದರು ದುಪ್ಪಟ್ಟು ಕೂಲಿ ನೀಡಬೇಕಿದೆ. ಅಲ್ಲದೆ ಮಲೆನಾಡಿನ ಭತ್ತ ಬೆಳೆಯುವ ಪ್ರದೇಶಗಳು ಮುಖ್ಯ ರಸ್ತೆಯಿಂದ ಅನತಿ ದೂರದಲ್ಲಿರುವುದರಿಂದ ಆಧುನೀಕ ಯಂತ್ರೋಪಕರಣಗಳನ್ನು ಬಳಸುವುದು ಕಷ್ಟಕರ, ಇದು ಸಹ ಭತ್ತದ ಬೆಳೆಯಿಂದ ಹಿಂದೆ ಸರಿಯುವಂತೆ ಮಾಡಿದೆ. ಇದಲ್ಲದೆ ಕಾಡುಪ್ರಾಣಿಗಳ ಕಾಟ ಸಹ ಭತ್ತ ಬೆಳೆಯುವವರನ್ನು ಹಿಂದೆ ಸರಿಯುವಂತೆ ಮಾಡಿದೆ. ರಾತ್ರಿ ಇಡೀ ಭತ್ತದ ಜಮೀನಿನ ಸಮೀಪದಲ್ಲಿ ಜೋಪಡಿ ಹಾಕಿಕೊಂಡು ಕಾಡಾನೆ, ಕಾಟಿಗಳು ಭತ್ತದ ಗದ್ದೆಗಳಿಗೆ ಇಳಿಯದಂತೆ ಕಣ್ಗಾವಲಿನಲ್ಲಿ ಕಾದರು ಕ್ಷಣ ಮಾತ್ರದಲ್ಲಿ ಭತ್ತದ ಗದ್ದೆಗಳಿಗೆ ಇಳಿಯುವ ಕಾಡುಪ್ರಾಣಿಗಳು ತಿಂದು ತುಳಿದು ಹಾಳು ಮಾಡುವುದರಿಂದ ಭತ್ತದ ಬೆಳೆ ನಮಗ್ಯಾಗೆ ಎಂಬ ತಿರ್ಮಾನ ರೈತಾಪಿವರ್ಗದ್ದು. ಈ ಎಲ್ಲ ಸಮಸ್ಯೆಯೊಂದಿಗೆ ಜನರು ಕಾಫಿ ಧಾರಣೆ ಏರುಮುಖವಾಗಿರುವುದರಿಂದ ಕಷ್ಟಕರವಾದ ಭತ್ತದ ಬೆಳೆ ನಮಗೆ ಬೇಡ ಇದೆ ಶ್ರಮವನ್ನು ಕಾಫಿ ತೋಟಗಳಿಗೆ ಹಾಕಿದರೆ ನಿಶ್ಚಿತಆಧಾಯಕ್ಕೆ ಕುಂದಿಲ್ಲ ಎಂಬ ತಿರ್ಮಾನ ಸಹ ರೈತಾಪಿವರ್ಗದಲ್ಲಿ ನೆಲಸಿರುವುದರಿಂದ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಭತ್ತದ ಗದ್ದೆಗಳು ಪಾಳು ಬೀಳಲು ಕಾರಣವಾಗಿದೆ.

ಭತ್ತದ ಗದ್ದೆಗಳಲ್ಲಿ ಅನ್ಯ ಬೆಳೆ:

ತಾಲೂಕಿನ ಸುಮಾರು 14 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶದಲ್ಲಿ ಈಗಾಗಲೇ ಸುಮಾರು 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ, ಅಡಿಕೆ ತೋಟಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನುಳಿದ ಸುಮಾರು ಆರೂವರೆ ಸಾವಿರ ಹೆಕ್ಟೇರ್‌ ಪ್ರದೇಶ ಪಾಳು ಬೀಡಲಾಗಿದೆ. ಸದ್ಯ ಪಾಳು ಬಿಟ್ಟಿರುವ ಭತ್ತದ ಗದ್ದೆಗಳು ಈಗ ಕಾಟಿ, ಕಾಡುಹಂದಿಗಳ ವಾಸ ಸ್ಥಾನವಾಗಿ ಬದಲಾಗಿರುವುದರಿಂದ ಈ ಕಾಡು ಪ್ರಾಣಿಗಳು ಒಮ್ಮೊಮ್ಮೆ ಗ್ರಾಮಗಳಿಗೂ ಲಗ್ಗೆ ಇಡಲಾರಂಭಿಸಿವೆ.ಯಾವ ಹೋಬಳಿಯಲ್ಲಿ ಎಷ್ಟು:

2010ರ ಕೃಷಿ ಇಲಾಖೆ ಅಂಕಿಅಂಶದ ಪ್ರಕಾರ ಕಸಬಾ ಹೋಬಳಿಯಲ್ಲಿ 3170 ಹೇಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ, 2025ರಲ್ಲಿ ಇದರ ಭತ್ತ ಬೆಳೆಯುವ ತೀರುವ ವಿಸ್ತಿರ್ಣದ ಸಂಖ್ಯೆ 1430 ಹೆಕ್ಟೇರ್‌, ಬೆಳಗೋಡು ಹೋಬಳಿಯಲ್ಲಿ 2010ರ ಅಂಕಿ ಅಂಶದ ಪ್ರಕಾರ 1880 ಹೆಕ್ಟೇರ್‌

ವಿಸ್ತೀರ್ಣವಿದ್ದರೆ 25ರಲ್ಲಿ ಕೇವಲ 860 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹೆತ್ತೂರು ಹೋಬಳಿಯಲ್ಲಿ ದಶಕದ ಹಿಂದೆ 3150 ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶವಿದ್ದರೆ ಪ್ರಸಕ್ತವರ್ಷ 1430 ಹೆಕ್ಟೇರ್‌ ಕುಸಿತಗೊಂಡಿದೆ. ಯಸಳೂರು ಹೋಬಳಿಯಲ್ಲಿ 3060 ಹೇಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ, ಸದ್ಯ 1490 ಹೆಕ್ಟೇರ್‌ಗೆ ಕುಸಿತಗೊಂಡಿದೆ. ಹಾನುಬಾಳ್ ಹೋಬಳಿಯಲ್ಲಿ 1910 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ ಈಗ 560 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ.

======

ಫೋಟೋ..12 ಎಸ್‍ಕೆಪಿಪಿ 1 ತಾಲೂಕಿನ ವನಗೂರು ಗ್ರಾಮ ಸಮೀಪ ಭತ್ತದ ಮಡಿಯನ್ನು ತುಳಿದು ಹಾಳು ಮಾಡಿರುವ ಕಾಡಾನೆಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು
ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ