ಹಾಲುತೊಂಡೆ, ಸಪ್ಪೆರೋಗದಿಂದ ರೇಷ್ಮೆ ಬೆಳೆಗಾರರಿಗೆ ನಷ್ಟದ ಜ್ವರ
ನಿರಂತರ ನಷ್ಟಕ್ಕೆ ತುತ್ತಾಗಿ ರೇಷ್ಮೆ ಬೆಳೆಯನ್ನು ಕಿತ್ತೆಸೆಯುತ್ತಿರುವ ಬೆಳೆಗಾರರುಸುರೇಶ ಯಳಕಪ್ಪನವರಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ರೇಷ್ಮೆ ಬೆಳೆಗೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡು ಬರುವ ಹಾಲುತೊಂಡೆ ಹಾಗೂ ಸ್ವಚ್ಛತೆ ಕೊರತೆಯಿಂದಾಗಿ ಬರುವ ಸಪ್ಪೆ ರೋಗದಿಂದಾಗಿ ನಷ್ಟಕ್ಕೆ ಗುರಿಯಾಗಿ ರೇಷ್ಮೆ ಬೆಳೆಗಾರರು ಸಪ್ಪೆ ಮೋರಿ ಹಾಕಿದ್ದಾರೆ.ತಾಲೂಕಿನ ರೇಷ್ಮೆ ಬೆಳೆಗೆ ಈ ರೋಗಗಳ ಗುಣಲಕ್ಷಣಗಳು ಅತ್ಯಂತ ತೀವ್ರ ಗತಿಯಲ್ಲಿ ಕಾಣಿಸಿಕೊಂಡಿದ್ದರಿಂದ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆಯನ್ನು ಜಿಸಿಬಿ ಯಂತ್ರದಿಂದ ಬುಡಸಮೇತ ಕಿತ್ತೆಸೆಯುತ್ತಿದ್ದಾರೆ. ರೇಷ್ಮೆ ಬೆಳೆಯಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತಿರುವುದಿಂದ ರೇಷ್ಮೆ ನಿರಂತರವಾಗಿ ನಷ್ಟಕ್ಕೆ ತುತ್ತಾಗುತ್ತಿದೆ. ಇದರ ಜೊತೆಗೆ ಪೆಬ್ರೈನ್, ಸುಣ್ಣಕಟ್ಟುರೋಗ, ಸೊಪ್ಪಿಗೆ ಬರುವ ನುಸಿರೋಗದ ಬಾಧೆ ಬೆಳೆಗಾರರನ್ನು ಮೆತ್ತಾಗಾಗಿಸಿದೆ. ಸ್ವಾಭಾವಿಕವಾಗಿ ರೇಷ್ಮೆ ಅತ್ಯಂತ ಸೂಕ್ಷ್ಮ ಗುಣವುಳ್ಳದ್ದಾಗಿದ್ದು, ಅಧಿಕ ಉಷ್ಣತೆಯಿಂದಾಗಿ ವಿವಿಧ ರೋಗಲಕ್ಷಣಗಳು ಸಾಂಕ್ರಾಮಿಕವಾಗಿ ಹರಡುತ್ತಿವೆ.
ರೇಷ್ಮೆ ಮನೆ ಸ್ವಚ್ಛತೆ ಮುಖ್ಯ:ರೇಷ್ಮೆ ಹುಳುವಿನ ಮನೆಯಲ್ಲಿ ಸರಿಯಾದ ಸಮಪ್ರಮಾಣದ ಉಷ್ಣತೆ ನಿರ್ವಹಣೆ ಮಾಡದಿದ್ದರೆ ರೋಗಲಕ್ಷಣಗಳು ಹೆಚ್ಚು ಕಾಣುತ್ತವೆ. ವೈಜ್ಞಾನಿಕವಾಗಿ ರೇಷ್ಮೆ ಚಾಕಿ ಮನೆಯವರು ಉಷ್ಣಾಂಶವನ್ನು ಸಮ ಪ್ರಮಾಣದಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ. ಬೇಸಿಗೆಯ ಪ್ರಖರತೆಗೆ ಹಾಲುತೊಂಡೆ ರೋಗ ತಾಲೂಕಿನಾದ್ಯಂತ ಹೆಚ್ಚು ವ್ಯಾಪಿಸಿದೆ. ಸ್ವಚ್ಛತೆ ಕೊರತೆ ಬ್ಯಾಕ್ಟೀರಿಯಾದಿಂದ ಬರುವ ಸಪ್ಪೆರೋಗದ ವೈರಸ್ ಹೆಚ್ಚಾಗಿ ರೇಷ್ಮೆ ಬೆಳೆ ೩೦ರಿಂದ ೪೦ರಷ್ಟು ನಷ್ಟವಾಗುತ್ತದೆ. ರೇಷ್ಮೆ ಸೊಪ್ಪು ಬಾಡದಂತೆ ರೈತರು ಕ್ರಮ ವಹಿಸಬೇಕು. ರೇಷ್ಮೆ ಸಾಕಾಣಿಕೆ ಮನೆಯನ್ನು ಸೋಂಕು ನಿವಾರಕ ಮಾಡಿದರೆ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎನ್ನುತ್ತಾರೆ ರೇಷ್ಮೆ ತಜ್ಞರು. ರೇಷ್ಮೆಯಲ್ಲಿ ವಿವಿಧ ಸಂಶೋಧನೆಗಳನ್ನು ಹೆಚ್ಚಿಸಿ ಪೂರಕವಾಗಿ ಸರಕಾರ ಸೂಕ್ತ ಕ್ರಮವಹಿಸಬೇಕು. ಕೆಲವೆಡೆ ತಂತ್ರಜ್ಞಾನದ ಕೊರತೆಯಿಂದ ರೇಷ್ಮೆ ಬೆಳೆಗಾರರು ಸಾಕಷ್ಟು ವೈಫಲ್ಯ ಅನುಭವಿಸಿದ್ದಾರೆ. ಇಲಾಖೆಯವರು ಅಗತ್ಯ ಮಾಹಿತಿಯನ್ನು ನೀಡಿ ರೇಷ್ಮೆ ಬೆಳೆಯಲು ಉತ್ತೇಜನ ನೀಡಬೇಕಿದೆ.