ಕನ್ನಡಪ್ರಭ ವಾರ್ತೆ ತುಮಕೂರುಆಹಾರ ಪಡಿತರ ಚೀಟಿ ಪಡೆಯಲು ಬಡಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿ ಹೊಸ ಪಡಿತರ ಚೀಟಿ ನೀಡಬೇಕು. ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರ ನಿಗಧಿಗೊಳಿಸಿರುವ ಮಾನದಂಡಗಳನ್ನು ಸರಳೀಕರಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಕೊಳಗೇರಿ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸ್ಲಂಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ನುಡಿದಂತೆ ನಡೆದಿರುವ ರಾಜ್ಯ ಸರ್ಕಾರ ಬಡಜನರಿಗೆ ಚುನಾವಣೆ ಪೂರ್ವ ಭರವಸೆ ನೀಡಿರುವಂತೆ ಬಡಜನರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಮುಂದುವರಿಸಬೇಕು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಮತ್ತು ಯುವನಿಧಿಯಿಂದ ಬಡವರಿಗೆ ಆರ್ಥಿಕ ಚೈತನ್ಯ ವೃದ್ಧಿಸುತ್ತಿದೆ ಎಂದರು.ಈಗಾಗಲೇ ರಾಜ್ಯಾದ್ಯಂತ ಹೊಸಪಡಿತರ ಚೀಟಿಗೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅಧಿಕೃತ ಪ್ರಕಟಣೆ ನೀಡಿದೆ. ಆದರೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸರದಿ ಸಾಲಿನಲ್ಲಿ ನಿಂತರು 1 ದಿನಕ್ಕೆ 2 ರಿಂದ 5 ಜನರಿಗೆ ಮಾತ್ರ ಸರ್ವರ್ ಸ್ವೀಕರಿಸುತ್ತಿದೆ. ಕೇಂದ್ರದ ನೀತಿ ಆಯೋಗ ಬಡಜನರ ಕಲ್ಯಾಣ ಯೋಜನೆಗಳನ್ನು ಕಡತಗೊಳಿಸಿ ರಾಜ್ಯಗಳಿಗೆ ಟಾರ್ಗೇಟ್ ಸಬ್ಸಿಡಿ ನೀಡುತ್ತಿರುವುದು ಸಂವಿಧಾನದ ಕಲ್ಯಾಣ ರಾಜ್ಯಕ್ಕೆ ವಿರುದ್ಧವಾದ ನಡೆಯಾಗಿದೆ, ನಮ್ಮರಾಜ್ಯದಲ್ಲಿ ಅನ್ನಭಾಗ್ಯಯೋಜನೆಯಡಿಯಲ್ಲಿ 1.13 ಕೋಟಿ ಕಾರ್ಡುದಾರರಿದ್ದು ಇದರಲ್ಲಿ 80 ಲಕ್ಷ ಗುರಿಯನ್ನುನೀಡಿರುವುದರಿಂದ 33 ಲಕ್ಷ ಕಾರ್ಡುದಾರರನ್ನು ಕಡಿತಗೊಳಿಸಲು ಸೂಚಿಸಿದ್ದು ಇದು ಸ್ಲಂ ನಿವಾಸಿಗಳು ಮತ್ತು ಬಡಜನರ ಮೇಲೆ ಪರಿಣಾಮ ಬೀರಲಿದೆ ಎಂದರು.