ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ರುಪ್ಪ ಕರ್ನಾಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಭರವಸೆಯನ್ನು ನೀಡಿದರು.ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಕರುಗಳಿಗೆ ಓಪಿಎಸ್ ಅಥವಾ ಪಿಂಚಣಿ, ಕಾಲ್ಪನಿಕ ವೇತನ, ಬಡ್ತಿ ಪಡೆದ ಶಿಕ್ಷಕರಿಗೆ ಟೈಮ್ ಬಾಂಡ್ ಮತ್ತು ಇನ್ಕ್ರಿಮೆಂಟ್ ಕೊಡಿಸಿ ವೇತನ ತಾರತಮ್ಯವನ್ನು ಸರಿಪಡಿಸಲಾಗುವುದು. ಅನುದಾನರಹಿತ ಶಾಲಾ ಕಾಲೇಜ್ ಶಿಕ್ಷಕರ ಸೇವಾಭದ್ರತೆ ಹಾಗೂ ಸಮಾನ ವೇತನ ಕೊಡಿಸು ವುದಾಗಿ ಹೇಳಿದರು.
ಪರಿಷತ್ತಿನ ಈ ಸದಸ್ಯರು ರಾಜ್ಯದ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಕರ್ನಾಟಕವನ್ನು ಕಟ್ಟಿ ಕೊಡುವ ಜವಾಬ್ದಾರಿ ನಿರ್ವಹಿಸಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚು ಉದ್ಯೋಗಗಳನ್ನುಸೃಷ್ಟಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವ ಕ್ರಿಯಾಶೀಲ ವ್ಯಕ್ತಿಗಳಾಗಿರಬೇಕಿದೆ. ಆದರೆ ಪರಿಷತ್ತಿಗೆ ಚುನಾಯಿತರಾಗಿ ಹೋದವರು ಶಿಕ್ಷಣ ಮತ್ತು ಶಿಕ್ಷಕರ ಹಿತ ಕಾಯುತ್ತಿಲ್ಲ ವೆಂದರು.ಕಳೆದ ಎರಡು ದಶಕದಲ್ಲಿ ಶಿಕ್ಷಣ ಕ್ಷೇತ್ರದ ಲೋಪ ದೋಷಗಳನ್ನು ಸರಿಪಡಿಸಲು ಶಿಕ್ಷಕರನ್ನು ಒಗ್ಗೂಡಿಸಿ, ಪಕ್ಷಾತೀತವಾಗಿ, ಬಲವಾದ ಹೋರಾಟಗಳನ್ನು ಜನಪರ ನೆಲೆಯಲ್ಲಿ ನಡೆಸಿಕೊಂಡು ಬಂದಿದ್ದೇನೆ. ಸರ್ಕಾರದ ಗಮನ ಸೆಳೆದು ಜನಪರವಾದ ತೀರ್ಮಾನಗಳನ್ನು ಕೈಗೊಳ್ಳಲು ಮತ್ತು ಸರ್ಕಾರವನ್ನು ಒತ್ತಾಯಿಸಲು ವಿಧಾನ ಪರಿಷತ್ತು ಚುನಾವಣೆ ಒಂದು ಉತ್ತಮ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕೋಲಾರ, ಚಿಕ್ಕಬಳ್ಳಾ ಪುರ, ತುಮಕೂರು, ಮಧುಗಿರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಎಲ್ಲ ಶಿಕ್ಷಕರ ಅಹವಾಲು ಆಲಿಸಿದ್ದೇನೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ತಾಳಿಕಟ್ಟೆ ಲೋಕೇಶ್ ಹೇಳಿದರು.
ಅನುದಾನ ರಹಿತ ಶಾಲೆಗಳ ಒಕ್ಕೂಟದ ಚಳ್ಳಕೆರೆ ತಾಕು ಅಧ್ಯಕ್ಷ ಯಾದಲಗಟ್ಟ ಜಗನ್ನಾಥ್, ರುಪ್ಸ ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.