ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಮಂಗಳವಾರದಿಂದ ರಾಜ್ಯಾದ್ಯಂತ ಆರಂಭಗೊಂಡಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಮಂಗಳವಾರದಿಂದ ರಾಜ್ಯಾದ್ಯಂತ ಆರಂಭಗೊಂಡಿತು.
ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮತದಾರರ ಮನೆ-ಮನೆಗೆ ಭೇಟಿ ನೀಡಿ ಮೊದಲ ದಿನ 12,48,314 ಎನುಮೆರೇಷನ್ ಫಾರ್ಮ್ (ಗಣತಿ ನಮೂನೆ) ವಿತರಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಇರುವ 5,54,32,314 ಕೋಟಿ ಮತದಾರರು ಈ ಎಸ್ಐಆರ್ ವ್ಯಾಪ್ತಿಗೆ ಒಳಪಡುತ್ತಾರೆ. ಈ ಪೈಕಿ ಮೊದಲ ದಿನ 12,48,314 ಮಂದಿ ಎಸ್ಐಆರ್ಗೆ ಒಳಗಾಗಿದ್ದಾರೆ. ಇವರಲ್ಲಿ ಮತದಾರರು ಭರ್ತಿ ಮಾಡಿ ಸಹಿ ಮಾಡಿ ವಾಪಸ್ ನೀಡಿದ ಗಣತಿ ನಮೂನೆಗಳಲ್ಲಿ 47,817 ನಮೂನೆಗಳನ್ನು ಬಿಎಲ್ಒಗಳು ಡಿಜಿಟಲೈಸ್ ಮಾಡಿದ್ದಾರೆ. ಅಂತೆಯೇ ರಾಜ್ಯದಲ್ಲಿ 6,840 ಮಂದಿ ಮತದಾರರು ಆನ್ಲೈನ್ನಲ್ಲಿ ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದ್ದಾರೆ.
291 ಮಂದಿ ಸಾವು:
ರಾಜ್ಯದಲ್ಲಿ ಮೊದಲ ದಿನ ಬಿಎಲ್ಒಗಳು ಗಣತಿ ನಮೂನೆ ವಿತರಿಸಲು ಮನೆ-ಮನೆ ಭೇಟಿ ನೀಡಿದ ವೇಳೆ 291 ಮಂದಿ ಮತದಾರರು ಮೃತಪಟ್ಟಿರುವುದು ಪತ್ತೆಯಾಗಿದೆ. ಅಂತೆಯೇ 116 ಮಂದಿ ಮತದಾರರು ಶಾಶ್ವತವಾಗಿ ವಾಸಸ್ಥಳ ಬದಲಿಸಿರುವುದು ಬೆಳಕಿಗೆ ಬಂದಿದೆ.
ಹಾಸನದಲ್ಲಿ ಹೆಚ್ಚು, ಬೆಂಗಳೂರು ಗ್ರಾ. ಕಡಿಮೆ:
ರಾಜ್ಯದ 34 ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು 1,46,025 ಮಂದಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 3,923 ಮಂದಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಪತ್ತೆಯಾಗಿರುವ 291 ಮೃತ ಮತದಾರರ ಪೈಕಿ ಅತಿಹೆಚ್ಚು ರಾಯಚೂರು ಜಿಲ್ಲೆಯಲ್ಲಿ 38, ಹಾಸನ ಜಿಲ್ಲೆ 29, ಕಲಬುರಗಿ ಜಿಲ್ಲೆ 27, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 19 ಮಂದಿ ಇದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.