SIR ಚಾಮರಾಜನಗರ ಜಿಲ್ಲೆ ಪ್ರಗತಿಗೆ ಸಿಇಒ ಅನ್ಬುಕುಮಾರ್‌ ಮೆಚ್ಚುಗೆ

KannadaprabhaNewsNetwork |  
Published : Jul 20, 2026, 02:30 AM IST
ಎಸ್.ಐ.ಆರ್ ಎನ್ಯುಮರೇಷನ್ ಫಾರಂಗಳನ್ನು (ಗಣತಿ ನಮೂನೆ) ವಿತರಿಸುವಲ್ಲಿ ಚಾಮರಾಜನಗರ ಜಿಲ್ಲೆಯು ಮುಂಚೂಣಿಯಲ್ಲಿದ್ದು | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಶ್ರೀರೂಪಾ ಅವರು ವಿವರ ನೀಡಿ ಜಿಲ್ಲೆಯಲ್ಲಿ ಗಣತಿ ನಮೂನೆಗಳ ವಿತರಣೆಯಾಗಿದ್ದು, ಸ್ವೀಕರಿಸಲಾದ ನಮೂನೆಗಳ ಡಿಜಿಟಲೀಕರಣವನ್ನು ಸಮರ್ಪಕವಾಗಿ ಪ್ರತಿನಿತ್ಯ ಮಾಡಲಾಗುತ್ತಿದೆ. ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ. ಪರಿಷ್ಕರಣೆ ಕಾರ್ಯವನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎಸ್‌ಐಆರ್‌ ಎನ್ಯುಮರೇಷನ್ ಫಾರಂಗಳನ್ನು (ಗಣತಿ ನಮೂನೆ) ವಿತರಿಸುವಲ್ಲಿ ಚಾಮರಾಜನಗರ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಸ್ವೀಕರಿಸಲಾದ ಫಾರಂಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಶೇ.೬೮.೪ರಷ್ಟು ಸಾಧನೆ ಮಾಡಿರುವ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಮತದಾರರ ನೋಂದಣಾಧಿಕಾರಿಗಳು ಅತ್ಯಂತ ಹೊಣೆಗಾರಿಕೆಯಿಂದ ತಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ವಿವಿಧ ಭಾಗಗಳಿಗೆ ಭೇಟಿ ನೀಡಿ ಪ್ರಕ್ರಿಯೆಯನ್ನು ಪರಿಶೀಲಿಸಬೇಕು. ಎಸ್‌ಐಆರ್‌ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಪರಿಷ್ಕರಣೆಯ ಪ್ರತಿನಿತ್ಯದ ಪ್ರಗತಿಯನ್ನು ನೋಂದಾಯಿತ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಕಡ್ಡಾಯವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು. ಅಲ್ಲದೇ ಎಸ್‌ಐಆರ್‌ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೂ ಪ್ರತಿವಾರ ರಾಜಕೀಯ ಪಕ್ಷಗಳ ಸಭೆ ಕರೆದು ಮಾಹಿತಿ ನೀಡಬೇಕು ಎಂದರು.ಈಗಾಗಲೇ ವಿತರಿಸಲಾಗಿರುವ ಎನ್ಯುಮರೇಶನ್ ಫಾರಂ (ಗಣತಿ ನಮೂನೆ) ಗಳನ್ನು ಭರ್ತಿ ಮಾಡಿ ವಾಪಸ್ಸು ಪಡೆಯಲು ಜಾಗೃತಿ ಮೂಡಿಸಬೇಕು. ಫಾರಂಗಳನ್ನು ಸ್ವೀಕರಿಸುವ ಹಂತದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಮತದಾರರಿಗೆ ಮಾರ್ಗದರ್ಶನ, ನೆರವು ನೀಡಬೇಕು. ಮತದಾರರ ಭಾವಚಿತ್ರ, ಸಹಿ ಹಾಗೂ ಇತರೆ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ ಅಥವಾ ಸೆರೆ ಹಿಡಿಯುವಾಗ ಸ್ಪಷ್ಟತೆ ಇರಬೇಕು. ಗುಣಮಟ್ಟದ ದಾಖಲೀಕರಣವಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಡೆದಿರುವ ಎಸ್‌ಐಆರ್‌ ಕಾರ್ಯ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ಬಗ್ಗೆ ಶ್ಲಾಘಿಸಿದ ಮುಖ್ಯ ಚುನಾವಣಾಧಿಕಾರಿಗಳಾದ ವಿ. ಅನ್ಬುಕುಮಾರ್‌ ಅವರು ಇದೇ ರೀತಿ ವೇಗ ಹಾಗೂ ಗುಣಮಟ್ಟದಿಂದ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀರೂಪಾ ಅವರು ವಿವರ ನೀಡಿ ಜಿಲ್ಲೆಯಲ್ಲಿ ಗಣತಿ ನಮೂನೆಗಳ ವಿತರಣೆಯಾಗಿದ್ದು, ಸ್ವೀಕರಿಸಲಾದ ನಮೂನೆಗಳ ಡಿಜಿಟಲೀಕರಣವನ್ನು ಸಮರ್ಪಕವಾಗಿ ಪ್ರತಿನಿತ್ಯ ಮಾಡಲಾಗುತ್ತಿದೆ. ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ. ಪರಿಷ್ಕರಣೆ ಕಾರ್ಯವನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು.

ಸಹಾಯಕ ಮುಖ್ಯ ಚುನಾವಣಾಧಿಕಾರಿ ಎ.ಎಚ್. ಮಹೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕೊಳ್ಳೇಗಾಲದ ಕ್ಷೇತ್ರ ಮತದಾರರ ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್‌ ಮೀನಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಹನೂರು ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್. ಮುನಿರಾಜು, ಚಾಮರಾಜನಗರ ಮತದಾರರ ನೋಂದಣಾಧಿಕಾರಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ.ಆರ್‌. ವಸುಂಧರ ಹೆಗಡೆ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್. ವಿಶ್ವನಾಥ್, ಸಹಾಯಕ ನೋಂದಣಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಐ.ಇ. ಬಸವರಾಜು, ಕೆ.ಎನ್. ಚೈತ್ರ, ಎಸ್.ಎಲ್. ನಯನ, ಬಿ. ಗಿರಿಜಾ, ಎಂ.ಎಸ್. ತನ್ವಯ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಬಳಿಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ರಂಗೋಲಿ ಪ್ರದರ್ಶನದ ಮೂಲಕ ಎಸ್‌ಐಆರ್‌ ಕುರಿತು ಆಯೋಜಿಸಿದ್ದ ಸ್ವೀಪ್ ಜಾಗೃತಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಜ್ಯೋತಿ ಮರುಪರಿಶೀಲನೆ ಪ್ರಕ್ರಿಯೆಗೆ ಪರ್ಯಾಯ ವ್ಯವಸ್ಥೆ: ಶ್ರೀನಿವಾಸ್ ನಂದಿಗಾವಿ
ಜೈನಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮ