ದೇವರಹಿಪ್ಪರಗಿ : ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಜೂನ್ 20ರಿಂದ ಜೂ.7ರವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ತಾಲೂಕಿನ ಮತದಾರರ ಮ್ಯಾಪಿಂಗ್ ಕಾರ್ಯ ಶೇ 95.05ರಷ್ಟು ಪೂರ್ಣಗೊಂಡಿದೆ. ಇಲ್ಲಿಯವರೆಗೆ ಮ್ಯಾಪಿಂಗ್ 75.40, ಪ್ರೋಜಣಿ 118.98, ಒಟ್ಟು 95.05ರಷ್ಟು ಆಗಿದೆ. ಈ ಕಾರ್ಯಕ್ಕೆ ತಾಲೂಕು ಮತದಾರರು ಸಹಕರಿಸಬೇಕು ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗದಿಂದ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯಂತೆ ದೇವರಹಿಪ್ಪರಗಿ ತಾಲೂಕಿನಲ್ಲಿ ಜೂ.20ರಿಂದ 29ರವರೆಗೆ ಮತದಾರರ ಪಟ್ಟಿ ಶುದ್ಧಗೊಳಿಸಲು ಅಧಿಕಾರಿಗಳಿಗೆ ತರಬೇತಿ ನೀಡುವುದು. ಜೂ.30ರಿಂದ ಜು.29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ತೆರಳಿ, ಅನುಬಂಧ ನಮೂನೆ -3 ನೀಡಿ ಆಯೋಗ ಸೂಚಿಸಿದ 12 ದಾಖಲೆ ಪಡೆಯುವುದು. ದಾಖಲೆ ಸ್ವೀಕರಿಸಲು ಮನೆಗಳಿಗೆ ಕನಿಷ್ಠ ಮೂರು ಸಲ ಭೇಟಿ ನೀಡಬೇಕು.
ಆ.5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆ.5ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ತಕರಾರು ಇದ್ದವರಿಗೆ ನೋಟಿಸ್ ನೀಡಿ ಪರಿಶೀಲಿಸಲಾಗುವುದು. ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.ತಾಲೂಕಿನಲ್ಲಿ ಒಟ್ಟು 2,31,100 ಮತದಾರರಿದ್ದು, ಪಟ್ಟಿಯಲ್ಲಿ ಇದ್ದ ವಿವರ/ಮಾಹಿತಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಿ ಮ್ಯಾಪಿಂಗ್ ಕಾರ್ಯ ಮಾಡಿಸಿಕೊಂಡಿದ್ದಾರೆ.
ಒಟ್ಟು ಶೇ.5ರಷ್ಟುಮತದಾರರ ಮ್ಯಾಪಿಂಗ್ ಆಗಬೇಕಾಗಿದೆ. ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ತಾಲೂಕಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿ, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದು ಹಾಗೂ ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಕೈಜೋಡಿಸಿ. ಸಮಸ್ಯೆಗಳಿದ್ದರೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಕಚೇರಿಗೆ ಭೇಟಿ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ ಮ್ಯಾಗೇರಿ, ಕುಮಾರ ಅವರಾದಿ ಸೇರಿ ಇತರರು ಉಪಸ್ಥಿತರಿದ್ದರು.