ಕನ್ನಡಪ್ರಭ ವಾರ್ತೆ ಸಿರಿಗೆರೆ
ತೆರೆದ ಬಾಗಿಲು: ಆಸ್ಪತ್ರೆಯ ಆಡಳಿತದ ಹೊರೆ ಅವರ ಹೆಗಲ ಮೇಲಿದ್ದರೂ ಅವರು ನಿತ್ಯವೂ ಏನಿಲ್ಲವೆಂದರೂ 200 ರಿಂದ 300 ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಕೊಡುತ್ತಿದ್ದರು. ರಾತ್ರಿ ಪಾಳಯದ ವೈದ್ಯರು ಇಲ್ಲವೆಂದರೆ ಅವರೇ ಮತ್ತೆ ಡ್ಯೂಟಿಗೆ ಸಜ್ಜುಗೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೂರಾರು ಸಂಖ್ಯೆಯ ಸಿಬ್ಬಂದಿಗೆ ಅವರು ಕಿರಿಯ ಸಹೋದರನಂತೆ ಇದ್ದರು.
ಕೋವಿಡ್ನ ಆತ್ಮವಿಶ್ವಾಸ:ಡಾ.ತಿಮ್ಮೇಗೌಡರು ಕೋವಿಡ್ನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಹೋರಾಡಿ ಜನರ ಹೃದಯ ಗೆದ್ದರು. ಸಿಬ್ಬಂದಿ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದ ವೇಳೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ ಪರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆಗ ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠದ ಹಾಸ್ಟೆಲಿನಲ್ಲಿ ಆರಂಭವಾದ ಕೋವಿಡ್ ಕೇಂದ್ರದಲ್ಲಿಯೂ ಡಾ.ತಿಮ್ಮೇಗೌಡರು ಅಪರಿಮಿತ ಸೇವೆ ಸಲ್ಲಿಸಿ ರೋಗಿಗಳ ಹೃದಯ ಗೆದ್ದಿದ್ದರು. ಗಣಿಗಾರಿಕೆ ಸಂಸ್ಥೆಗಳಿಗೆ ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆ ರೂಪದಲ್ಲಿ ಪಡೆದು ಅವುಗಳನ್ನು ಸಾರ್ವಜನಿಕರಿಗೆ ಬಳಸಿದ ಕೀರ್ತಿ ತಿಮ್ಮೇಗೌಡರದ್ದು. 2 ವರ್ಷದ ಹಿಂದೆಯಷ್ಟೇ ತಿಮ್ಮೇಗೌಡರು ವಿವಾಹವಾಗಿದ್ದು ಅವರಿಗೆ ಒಂದು ವರ್ಷದ ಪುಟ್ಟ ಕಂದಮ್ಮವಿದೆ.