ಸಿರುಗುಪ್ಪದ ರಾಷ್ಟ್ರೀಯ ಹೆದ್ದಾರಿ ಹಾಳು: ಜನರ ಗೋಳು ಕೇಳೋರು ಯಾರು?

KannadaprabhaNewsNetwork |  
Published : Jun 10, 2025, 11:24 AM IST
ಸಿರುಗುಪ್ಪ ನಗರದಲ್ಲಿ ಹಾದು ಹೋಗಿರುವ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿನ ಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ.  | Kannada Prabha

ಸಾರಾಂಶ

ನಗರದ ರಾಷ್ಟ್ರೀಯ ಹೆದ್ದಾರಿ (150-ಎ) ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಹಾಗೂ ರಸ್ತೆ ಬದಿಯ ಹೋಟೆಲ್, ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ನಿತ್ಯ ಧೂಳಿನ ಮಜ್ಜನವಾಗುತ್ತಿದೆ.

ಭೀತಿಯಿಂದಲೇ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ಸ್ಥಿತಿ । ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ನಿತ್ಯ ಧೂಳಿನ ಮಜ್ಜನ ಮಲ್ಲಿಕಾರ್ಜುನ ಎಚ್‌.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ನಗರದ ರಾಷ್ಟ್ರೀಯ ಹೆದ್ದಾರಿ (150-ಎ) ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಹಾಗೂ ರಸ್ತೆ ಬದಿಯ ಹೋಟೆಲ್, ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ನಿತ್ಯ ಧೂಳಿನ ಮಜ್ಜನವಾಗುತ್ತಿದೆ.

ರಸ್ತೆಯ ತುಂಬಾ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ ಸವಾರರು ರಸ್ತೆಯ ಗುಂಡಿಗಳನ್ನು ತಪ್ಪಿಸಲು ಹೋಗುವ ವೇಳೆ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಭೀತಿಯಿಂದಲೇ ಈ ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿ ಆಸುಪಾಸು ಹತ್ತಾರು ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಸ್ ಡಿಪೋ, ಕಲ್ಯಾಣ ಮಂಟಪ ಇದ್ದು ವಾಹನಗಳ ಸಂಚಾರದಿಂದ ಬರುವ ಧೂಳಿನಿಂದ ವ್ಯಾಪಾರಿಗಳು ರೋಸಿ ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಬಳ್ಳಾರಿಯಿಂದ ಬೀದರ್‌ವರೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಾರೀ ವಾಹನಗಳು ಸೇರಿದಂತೆ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ರಸ್ತೆಯ ತುಂಬಾ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಒದ್ದಾಡುವಂತಾಗಿದ್ದರೆ, ರಸ್ತೆ ಬಳಿಯ ವ್ಯಾಪಾರ ವಹಿವಾಟು ನಡೆಸುವವರು ಧೂಳಿನಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ತಾಲೂಕಿನ ಇಬ್ರಾಹಿಂಪುರ ಗ್ರಾಮದ ಮಾರೆಮ್ಮ ದೇವಸ್ಥಾನದಿಂದ ಹಳೆಕೋಟೆ ಗ್ರಾಮದ ಮಾರೆಮ್ಮ ದೇವಸ್ಥಾನದ ವರೆಗೆ ಸುಮಾರು ₹130 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಆಮೆಗತಿಯಲ್ಲಿ ನಡೆದಿದೆ. ಇದು ಸಿರುಗುಪ್ಪ ಜನರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಭತ್ತದ ನಾಡು ಎಂದೇ ಪ್ರಸಿದ್ಧಿಯಾಗಿರುವ ಸಿರುಗುಪ್ಪ ತಾಲುಕು ಕೇಂದ್ರದಿಂದ ರಾಜ್ಯ, ಹೊರ ರಾಜ್ಯಗಳ ನಾನಾ ಕಡೆ ನಿತ್ಯ ನೂರಾರು ಕ್ವಿಂಟಲ್ ಭತ್ತ ಹಾಗೂ ಅಕ್ಕಿಯನ್ನು ತುಂಬಿಕೊಂಡು ಭಾರೀ ಗಾತ್ರದ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ಇದು ಕೂಡ ರಸ್ತೆ ಹಾಳಾಗಲು ಮತ್ತೊಂದು ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಿನದಿನಕ್ಕೆ ರಸ್ತೆಯಲ್ಲಿ ಗುಂಡಿಗಳು ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರ ಪರದಾಟಕ್ಕೆ ಕೊನೆ ಎಂಬ ಪ್ರಶ್ನೆ ಮೂಡಿದೆ. ರಾಷ್ಟ್ರೀಯ ಹೆದ್ದಾರಿ ಕಡೆ ಗಮನ ಹರಿಸದ ಜನಪ್ರತಿನಿಧಿಗಳಿಗೆ ನಗರದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ