ಶ್ರಾವಣ ಸಂಜೆ-ಶರಣರ ಸಂದೇಶ-2024 ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಶಿವಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸಾಹಿತಿ ಹೊಸೂರು ಪುಟ್ಟರಾಜು ಹೇಳಿದರು.ತಾಲೂಕಿನ ಮಲ್ಲೇಶ್ವರದ ಮಾರುತಿ ಬಡಾವಣೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಶ್ರಾವಣ ಸಂಜೆ-ಶರಣರ ಸಂದೇಶ-2024 ಕಾರ್ಯಕ್ರಮ ಉದ್ಘಾಟನೆಯಲ್ಲಿ ಶರಣ ಸಂದೇಶದ ಮಹತ್ವ ಕುರಿತು ಉಪನ್ಯಾಸ ನೀಡಿದರು.ಪ್ರಸ್ತುತ ನಾವು ಭ್ರಮಾಲೋಕದಲ್ಲಿದ್ದೇವೆ. ಇಂದು ಈ ಕ್ಷಣ ಇರುವುದೆಲ್ಲವೂ ಶಾಶ್ವತವಾಗಿ ನಮ್ಮದು ಎಂದುಕೊಂಡಿದ್ದೇವೆ. ಆದರೆ ಅದ್ಯಾವುದೂ ಶಾಶ್ವತವಲ್ಲ. ನಾವು ಮಾಡಿದ ಸತ್ಕಾರ್ಯಗಳಿಂದ ಪಡೆದ ಪುಣ್ಯಮಾತ್ರ ನಮ್ಮದು. ನಮ್ಮ ನಂತರವೂ ಜನಮನದಲ್ಲಿ ಉಳಿದುಕೊಳ್ಳಬೇಕೆಂದರೆ ಜೀವಿಸಿರುವಾಗಲೇ ಸತ್ಕಾರ್ಯನಿರತರಾಗಬೇಕು. ಶಿವಶರಣರೂ ಸಹ ತಮ್ಮ ವಚನ ಗಳಲ್ಲಿ ಈ ಜೀವನಾನುಭವದ ಸತ್ಯ ಹೇಳಿದ್ದಾರೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪರಿಷತ್ತಿನ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಶ್ರಾವಣ ಮಾಸವಿಡೀ ನಿತ್ಯ ಒಂದೊಂದು ಮನೆಯಲ್ಲಿ ಶರಣ ಸಂದೇಶ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಶರಣರ ವಿಚಾರಧಾರೆಗಳನ್ನು ಮೆಲುಕು ಹಾಕುವ ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಚಿಂತಕರಿಂದ ಉಪನ್ಯಾಸ ಮಾಲಿಕೆ ನಡೆಯಲಿದೆ. ಜನರಲ್ಲಿ ಶರಣರ ಚಿಂತನೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕ್ಯಾತನಬೀಡು ರವೀಶ್ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರಿನ ಬಸವ ತತ್ವ ಪೀಠದ ಶ್ರೀಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗು ಸಾಹಿತಿ ಹಿರೇನಲ್ಲೂರು ಶಿವು ಹಾಗು ಮತ್ತಿತರ ಸಾಧಕರನ್ನು ಗೌರವಿಸಲಾಯಿತು. ಮಲ್ಲೇಶ್ವರ ಗ್ರಾಪಂ ಅಧ್ಯಕ್ಷೆ ಯಶೋಧ ಧರ್ಮರಾಜು, ಸದಸ್ಯರಾದ ವಸಂತ ಕುಮಾರ್, ಎಂ.ಸಿ.ಮಾಲತೇಶ್, ಸಿ.ಎನ್. ಶೇಖರಪ್ಪ, ಎಸ್.ವಿ.ಪರಮೇಶ್ವರಪ್ಪ, ಪರಿಷತ್ತಿನ ಗೌರವಾಧ್ಯಕ್ಷ ಎಂ.ರಂಗಪ್ಪ, ನಿವೃತ್ತ ಕಂದಾಯ ಇಲಾಖೆ ನೌಕರ ಗುರುರಾಜ ಹಾಲ್ಮತ್ ಇತರರಿದ್ದರು.7ಕೆಕೆಡಿಯು3.ಕಡೂರು ಸಮೀಪದ ಮಲ್ಲೇಶ್ವರದ ಮಾರುತಿ ಬಡಾವಣೆಯಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಯಳನಾಡು, ಚಿಕ್ಕಮಗಳೂರು ಶ್ರೀಗಳು ಉದ್ಘಾಟಿಸಿದರು.