ಶಿವಮೊಗ್ಗ ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಅವರು ಸೋಮವಾರ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಫ್ಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ವಾರದ ಹಿಂದಷ್ಟೇ ಒಂದೇ ದಿನ 11 ಮಂದಿಗೆ ಕೆಎಫ್ಡಿ ಸೋಂಕು ಪತ್ತೆ ಬಳಿಕ ಸೋಮವಾರ ಮತ್ತೆ 6 ಮಂದಿಯಗೆ ಕೆಎಫ್ಡಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವರ್ಷ ಆರಂಭದಲ್ಲೆ ಕೆಎಫ್ಡಿಗೆ 19 ವರ್ಷದ ಯುವತಿ ಸಾವನ್ನಪ್ಪಿದ ಬಳಿಕ ಕೆಎಫ್ಡಿ ಪ್ರಕರಣವನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕೆಎಫ್ಡಿ ಬಾಧಿತ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿರುವವರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಅದರಂತೆ ಸೋಮವಾರವೂ ಜ್ವರದಿಂದ ಬಳಲುತ್ತಿದ್ದ 42 ಮಂದಿಯ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಇದರಲ್ಲಿ 6 ಮಂದಿಗೆ ಕೆಎಫ್ಡಿ ಸೋಂಕು ಇರುವುದು ದೃಢಪಟ್ಟಿದೆ. ಕೆಎಫ್ಡಿ ಸೋಂಕು ತಗುಲಿರುವ 6 ಮಂದಿಯು ಹೊಸನಗರ ತಾಲೂಕಿನವರಾಗಿದ್ದು, ಇವರು ಅಡಕೆ ಸುಲಿಯುವ ಕೆಲಸ ಮಾಡುವವರಾಗಿದ್ದಾರೆ. ಇವರು ಈಚೇಗಷ್ಟೇ ತೀರ್ಥಹಳ್ಳಿಗೆ ಕೆಲಸದ ನಿಮಿತ್ತ ತೆರಳಿದ್ದರು ಎಂಬುದು ತಿಳಿದು ಬಂದಿದೆ. ಸದ್ಯ ಇವರಿಗೆ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 32 ಮಂದಿಗೆ ಕೆಎಫ್ಡಿ ಸೋಂಕು ತಗುಲಿದ್ದು, ಇದರಲ್ಲಿ 21 ಮಂದಿ ಗುಣಮುಖರಾಗಿದ್ದಾರೆ. 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.