ಉದ್ಯೋಗದಲ್ಲಿ ಕೌಶಲ್ಯ ಅತ್ಯಗತ್ಯ: ಬಾಲರಾಜ ಕಜಂಪಾಡಿ ಭಟ್‌

KannadaprabhaNewsNetwork |  
Published : Nov 11, 2025, 03:00 AM IST
10ನಿಟ್ಟೆ - 'ಎಲಿಕ್ಸಿರ್' ವಿಜ್ಞಾನ ಪ್ರದರ್ಶನಉದ್ಘಾಟಿಸಿದ ಬಾಲರಾಜ್ ಕಜಂಪಾಡಿ | Kannada Prabha

ಸಾರಾಂಶ

ಸೋಮವಾರ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗವು ತನ್ನ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ 2 ದಿನಗಳ ‘ಎಲಿಕ್ಸಿರ್ - 2025’ ವಿದ್ಯಾರ್ಥಿಗಳ ಮಾದರಿ ವಸ್ತುಪ್ರದರ್ಶನದ 14ನೇ ಆವೃತ್ತಿ ಉದ್ಘಾಟನೆಗೊಂಡಿತು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಎಲಿಕ್ಸಿರ್’ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಚಾಲನೆ

ಕಾರ್ಕಳ: ಜ್ಞಾನ ಮತ್ತು ಕೌಶಲ್ಯವೆಂಬುದು ಒಂದು ವಾಹನದ ಎರಡು ಚಕ್ರಗಳಿದ್ದಂತೆ. ಕೇವಲ ಜ್ಞಾನದಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಾಗದು. ಇಂದಿನ ದಿನಗಳಲ್ಲಿ ಪ್ರತಿಯೊಂದು ಉದ್ಯೋಗದಲ್ಲೂ ಕೌಶಲ್ಯವು ಪ್ರಮುಖ ಅಂಶವಾಗಿ ಪರಿಗಣಿಸಲ್ಪಡುತ್ತದೆ ಎಂದು ಮುಂಬೈನ ಟ್ರಾಂಬೆ ಟಾಟಾ ಪವರ್ ಸ್ಕಿಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿವೃತ್ತ ಪ್ರಾಂಶುಪಾಲ ಬಾಲರಾಜ ಕಜಂಪಾಡಿ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗವು ತನ್ನ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ 2 ದಿನಗಳ ‘ಎಲಿಕ್ಸಿರ್ - 2025’ ವಿದ್ಯಾರ್ಥಿಗಳ ಮಾದರಿ ವಸ್ತುಪ್ರದರ್ಶನದ 14ನೇ ಆವೃತ್ತಿ ಉದ್ಘಾಟಿಸಿ, ವಿದ್ಯಾರ್ಥಿಗಳು ನವೀನತೆ ಮತ್ತು ಅನುಭವಾಧಾರಿತ ಅಧ್ಯಯನದತ್ತ ಗಮನ ಹರಿಸಬೇಕು ಎಂದು ಪ್ರೊತ್ಸಾಹಿಸಿದರು.

ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮಾತನಾಡಿ, ಸೃಜನಶೀಲತೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಿಭಾಗದ ಶ್ರಮವನ್ನು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು ಅವರು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದ ಸಂಪೂರ್ಣ ತಂಡವನ್ನು ಅಭಿನಂದಿಸಿದರು.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ. ಅವರು ಸ್ವಾಗತ ಭಾಷಣ ಮಾಡಿ, ‘ಎಲಿಕ್ಸಿರ್’ನ ಪ್ರಯಾಣವನ್ನು ವಿವರಿಸಿದರು ಮತ್ತು ಹಳೆಯ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ಪ್ರತಿನಿಧಿಗಳ ನಿರಂತರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ವಸ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ವಿನೂತನ ವಿದ್ಯಾರ್ಥಿ ಯೋಜನೆಗಳನ್ನು ಪ್ರದರ್ಶಿಸಲಾಯಿತು. ಇವುಗಳಲ್ಲಿ ವಿದ್ಯುತ್ ವ್ಯವಸ್ಥೆಗಳು, ರಿನೀವೇಬಲ್ ಎನರ್ಜಿ, ಸ್ವಯಂಚಾಲಿತ ತಂತ್ರಜ್ಞಾನಗಳು ಮತ್ತು ಎಂಬೆಡೆಡ್ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸೃಜನಶೀಲ ಪರಿಹಾರಗಳನ್ನು ಒಳಗೊಂಡಿದ್ದವು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ವಿನ್ಯಾಸಗೊಳಿಸಿದ ಸಂಸ್ಥೆಯ ಎರಡು ಆಂತರಿಕ ಉತ್ಪನ್ನಗಳು ‘ಟ್ರೈಸೈಕಲ್’ ಮತ್ತು ‘ಇ-ಸ್ಪಿನ್ ಬೈಕ್’ ಕಾರ್ಯಕ್ರಮದ ವೇಳೆ ಸಂಸ್ಥೆಯ ಬಳಕೆಗೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ 10 ಕೈಗಾರಿಕಾ ಪ್ರತಿನಿಧಿಗಳು ಹಾಗೂ 35 ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ, ಅಕಾಡೆಮಿಕ್–ಕೈಗಾರಿಕಾ-ಹಳೆಯ ವಿದ್ಯಾರ್ಥಿ ಸಂವಾದಕ್ಕೆ ಸಜೀವ ವೇದಿಕೆಯಾಗಿಸಿದರು. ಎಲಿಕ್ಸಿರ್ ಸಂಯೋಜಕ ರವಿಕಿರಣ ರಾವ್ ವಂದಿಸಿದರು. ಎಲಿಕ್ಸಿರ್ ವಿದ್ಯಾರ್ಥಿ ಸಂಯೋಜಕಿ ಭೂಮಿಕಾ ಆಚಾರ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು ಮತ್ತು ಅನ್ವಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಪೂರ್ಣಪ್ರಮಾಣದಲ್ಲಿ ವ್ಯಯಿಸಿ: ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ
ಕನಕಗಿರಿ ತಾಲೂಕಿನ 13 ಕೆರೆ ಭರ್ತಿ ಮಾಡಲು ಒತ್ತಾಯ, ರೈತರ ಪ್ರತಿಭಟನೆ