ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ 117ನೇ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್ ಅವರನ್ನು, ಕುಮಾರಸ್ವಾಮಿ ವಿರುದ್ಧ ಅವಹೇಳನ ಹೇಳಿಕೆ ಸಂಬಂಧ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬಹಿಷ್ಕರಿಸಿದರು.
ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ। ಕೆ.ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿದರು. ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸಹ ಹರಸಾಹಸಪಟ್ಟು ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದರು.ಉದ್ರಿಕ್ತರನ್ನು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸಮಾಧಾನಪಡಿಸಿದರೂ ಉದ್ರಿಕ್ತರು ಕೇಳಲಿಲ್ಲ. ಕೊನೆಗೆ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಅವರನ್ನು ಕರೆಸಿ ಶಾಂತಿಗೊಳಿಸುವಲ್ಲಿ ಯಶಸ್ವಿಯಾದರು. ಯಾರ ಮೇಲಿನ ದ್ವೇಷವನ್ನು ಕೆಂಪೇಗೌಡರ ಮೇಲೆ ತೀರಿಸಿಕೊಳ್ಳಬೇಡಿ. ಕೆಂಪೇಗೌಡರ ಜಯಂತಿಯನ್ನು ಶಾಂತವಾಗಿ ಆಚರಿಸಿ. ನಿಮ್ಮ ನಿರ್ಧಾರಗಳಿಂದ ಇಡೀ ಚಿಕ್ಕಬಳ್ಳಾಪುರಕ್ಕೆ ಕೆಟ್ಟ ಹೆಸರು ಬರುತ್ತೆ. ಕೆಂಪೇಗೌಡ ಜಯಂತಿ ಆಚರಣೆಗೆ ಅವಕಾಶ ನೀಡದಿದ್ದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಾಕಷ್ಟು ಮಂದಿಗೆ ಅಪಮಾನ ಮಾಡಿದಂತೆ ಎಂದು ಸಮಾಧಾನಪಡಿಸಿದರು. ಬಳಿಕ ಕೆಂಪೇಗೌಡ ಜಯಂತಿ ಮುಂದುವರಿಯಿತು. ಆಗ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಿಂದ ಹೊರ ನಡೆದರು.